ADVERTISEMENT

ಬೆರಗಿನ ಬೆಳಕು: ಹಿರಿದಾದ ಮಹಿಮೆಗಳು

ಡಾ. ಗುರುರಾಜ ಕರಜಗಿ
Published 22 ಸೆಪ್ಟೆಂಬರ್ 2022, 15:31 IST
Last Updated 22 ಸೆಪ್ಟೆಂಬರ್ 2022, 15:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮೆರೆಯುವವು ನೂರಾರು ಮೈಮೆಗಳು ಸೃಷ್ಟಿಯಲಿ |
ಧರಣಿಯವು, ಗಗನದವು, ಮನುಜಯತ್ನದವು ||
ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ
ಅರಿವುಳ್ಳೊಲುಮೆ ಪಿರಿದು – ಮಂಕುತಿಮ್ಮ ||721||

ಪದ-ಅರ್ಥ: ಮೈಮೆಗಳು=ಮಹಿಮೆಗಳು, ಪಿರದೆಂಬೆನವುಗಳೊಳು=ಪಿರಿದು(ಹಿರಿದಾದದ್ದು)+
ಎಂಬೆನು+ಅವುಗಳೊಳು(ಅವುಗಳಲ್ಲಿ), ಧರುಮವರಿತವನೊಲುವೆ= ಧರುಮದ(ಧರ್ಮವ)+ಅರಿತವನ+ಒಲುಮೆ,ಅರಿವುಳ್ಳೊಲುಮೆ=ಅರಿವುಳ್ಳ+ಒಲುಮೆ, ಪಿರಿದು=ಹಿರಿದು.

ವಾಚ್ಯಾರ್ಥ: ಜಗತ್ತಿನಲ್ಲಿ ನೂರಾರು ಮಹಿಮೆಗಳು ಮೆರೆಯುವುದು ಕಾಣುತ್ತದೆ. ಅವುಗಳಲ್ಲಿ ಕೆಲವು ಭೂಮಿಯವು, ಆಕಾಶದವು, ಮನುಷ್ಯ ಪ್ರಯತ್ನದವು. ಆ ಮಹಿಮೆಗಳಲ್ಲಿ ಹಿರಿದಾದವುಗಳು ಧರ್ಮವನ್ನು ತಿಳಿದವನ ಮತ್ತು ಅರಿವನ್ನು ಹೊಂದಿದ ಒಲುಮೆಗಳು.
ವಿವರಣೆ: ಜಗತ್ತಿನಲ್ಲಿ ಅನೇಕ ಮಹಿಮೆಗಳು ಕಾಣುತ್ತ ಅದನ್ನು ಅತ್ಯಂತ ಆಕರ್ಷಕವಾಗಿ, ಮೈಮರೆಯುವಂತೆ ಮಾಡಿವೆ. ಅವುಗಳಲ್ಲಿ ಕೆಲವು ಭೂಮಿಗೆ ಸಂಬಂಧಿಸಿದವು. ಭೂಮಿಯ ಪ್ರಾಕೃತಿಕ ಸಂಗತಿಗಳು ಅದ್ಭುತವಾಗಿವೆ.

ADVERTISEMENT

ತುರ್ಕಾನಾದ ಸರೋವರದ ಅತ್ಯಂತ ಕ್ಷಾರೀಯಗುಣ, ನಿತ್ಯವೂ ಮಳೆಯಾಗುವ ದಕ್ಷಿಣ ಅಮೇರಿಕೆಯ ಮೌಂಟ್ ರೋರೈಮಾದ ಅತ್ಯಂತ ಎತ್ತರದ ಪರ್ವತ, ಕೆನಡಾದ ಕ್ಪಿಬೆಕ್‌ನಲ್ಲಿರುವ ಕಲ್ಪನಾತೀತವಾದ ಬೃಹತ್ ಕುಳಿ, ವೆನೆಜುವೆಲಾದ ಅತ್ಯದ್ಭುತವಾದ ಏಂಜೆಲ್ಸ ಜಲಪಾತ ಇವುಗಳೊಂದಿಗೆ ನಮ್ಮವೆ ಆದ ಹಿಮವತ್ ಪರ್ವತಗಳು, ವಿಶಾಲ ಮರುಭೂಮಿಗಳು,
ಬೆರಗು ಹುಟ್ಟಿಸುವ ಅಮೆಜಾನ್ ಕಾಡುಗಳು, ಈ ಭೂಮಿಯ ನಿಸರ್ಗ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇದಲ್ಲದೆ ಆಕಾಶದ ವೈಭವವೇನು ಕಡಿಮೆಯದೆ? ಅಲ್ಲಿ ಏನೂ ಇಲ್ಲ ಎನ್ನುವ ವಿಸ್ತಾರದಲ್ಲಿ ಏನಿಲ್ಲ? ತಾರೆಗಳು, ಗ್ರಹಗಳು, ಸೂರ್ಯ, ಚಂದ್ರ, ನಿಹಾರಿಕೆಗಳು, ಧೂಮಕೇತುಗಳು, ಕಪ್ಪು ರಂಧ್ರಗಳು, ಸತತ ಸುತ್ತುವ ಆಕಾಶಕಾಯಗಳು. ಇವೆಲ್ಲ ಕಿಕ್ಕಿರಿದು ನೆರೆದು ಬೆರಗು ಹುಟ್ಟಿಸಿವೆ. ಈ ನೈಸರ್ಗಿಕ ಅದ್ಭುತಗಳೊಂದಿಗೆ ಮನುಷ್ಯನ ಬುದ್ಧಿವಂತಿಕೆ, ಪರಿಶ್ರಮಗಳು ಬೆರೆತು ಮತ್ತಷ್ಟು ಮಹಿಮೆಗಳನ್ನು ಸೃಷ್ಟಿಸಿವೆ. ಪ್ರಪಂಚದ ಅದ್ಭುತಗಳಾದ ಚೀನಾದ ಗೋಡೆ, ತಾಜಮಹಲ, ಪೀಸಾದ ವಾಲಿದ ಗೋಪುರ ಇಂಥವೆಲ್ಲ ಈ ಜಗತ್ತಿನ ಸಿರಿಯನ್ನು ಹಿರಿದಾಗಿಸಿವೆ. ಇವೆಲ್ಲ ಮಹಿಮೆಗಳೇ ಸರಿ. ಆದರೆ ಇವೆಲ್ಲವುಗಳಿಗಿಂತ ಹಿರಿದಾದವು ಎರಡು ವಿಶೇಷ ಮಹಿಮೆಗಳು. ಮೊದಲನೆಯದು ಧರ್ಮವನ್ನು ಚೆನ್ನಾಗಿ ತಿಳಿದ ಒಲುಮೆ.

ಬದುಕಿನಲ್ಲಿ ಒಲುಮೆ ಒಂದು ಬಹುದೊಡ್ಡ ಭಾವ. ವ್ಯಕ್ತಿಗಳನ್ನು, ಸಂಸ್ಥೆಗಳನ್ನು, ದೇಶಗಳನ್ನು ಒಂದುಗೂಡಿಸುವುದು ಒಲುಮೆ. ಆದರೆ ಅದು ಧರ್ಮದ ನೆಲೆಯ ಮೇಲೆ ನಿಂತಿರಬೇಕು. ಅದು ಸ್ತ್ರೀ- ಪುರುಷರ ನಡುವಿನ ಒಲುಮೆಯಾಗಬಹುದು, ಎರಡು ಜನರ ಮಧ್ಯದ ಸ್ನೇಹವಾಗಬಹುದು, ಕೆಲವು ದೇಶಗಳ ನಡುವಿನ ಬಾಂಧವ್ಯವಾಗಬಹುದು, ಇವೆಲ್ಲ ಪ್ರಪಂಚಕ್ಕೆ ಒಳಿತೇ. ಆದರೆ ಅವು ಧರ್ಮದ ಆಧಾರದಲ್ಲಿ ಇದ್ದಾಗ ಪ್ರಪಂಚವನ್ನು ಕಟ್ಟುತ್ತವೆ. ಅಧರ್ಮದ ಒಲವಾದರೆ ಅದು ಜಗತ್ತನ್ನು ಒಡೆದುಹಾಕುತ್ತದೆ. ಇದೆಲ್ಲಕ್ಕೂ ಸರಿಯಾದ ತಿಳಿವು ಬೇಕು. ಅದೇ ಅರಿವಿನ ಒಲುಮೆ. ಹೀಗೆ ಧರ್ಮದ ಹಾಗೂ ತಿಳಿವಿನ ನೆಲೆಯಲ್ಲಿ ಹೊಳೆದ ಒಲವು ಸೃಷ್ಟಿಯ ಅನೇಕ ಮಹಿಮೆಗಳಲ್ಲಿ ಪ್ರಮುಖವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.