ADVERTISEMENT

ವೇದವ್ಯಾಸರ ಶಿವಪುರಾಣ ಸಾರ - ಭಾಗ 155| ಮತ್ತೆ ಕಾಮವಿಕಾರನಾದ ಬ್ರಹ್ಮ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:31 IST
Last Updated 23 ಜೂನ್ 2022, 19:31 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಗಣಪತಿ ಸಚ್ಚಿದಾನಂದ ಸ್ವಾಮೀಜಿ    

ದಕ್ಷಪ್ರಜಾಪತಿಯು ಶಿವನಿಗೆ ತನ್ನ ಪುತ್ರಿಯನ್ನು ಮದುವೆಮಾಡಿಕೊಟ್ಟ ನಂತರ, ಅಳಿಯನಿಗೆ ಅನೇಕ ಬಗೆಯ ಬಳುವಳಿಗಳನ್ನು ಕೊಟ್ಟ. ಈ ಸಂದರ್ಭದಲ್ಲಿ ಹರಿಯು ತನ್ನ ಪತ್ನಿ ಲಕ್ಷ್ಮಿಯೊಡನೆ ಶಿವನ ಬಳಿಗೆ ಬಂದು ಕೈಮುಗಿದುಕೊಂಡು ಹೇಳಿದ: ‘ಓ ಮಹಾದೇವನೆ, ನೀನು ಜಗತ್ತಿಗೆಲ್ಲಾ ತಂದೆಯು. ಸತೀದೇವಿಯು ಮಾತೆಯು. ನೀವೀರ್ವರೂ ಸತ್ಪುರುಷರಿಗೆ ಕ್ಷೇಮವನ್ನುಂಟು ಮಾಡಿ, ದುಷ್ಟರನ್ನು ನಿಗ್ರಹಿಸಲು ಅವತರಿಸಿರುವಿರಿ. ಅನಾದಿಯಾದ ವೇದವೂ ಹಾಗೆಯೇ ಹೇಳುವುದು.

‘ಎಲೈ ಶಂಕರನೇ, ನೀನು ಶುಭ್ರವಾದ ಬಿಳಿಬಣ್ಣದಿಂದ ಹೊಳೆಯು ತ್ತಿದ್ದರೂ, ನಯವಾದ ಕಾಡಿಗೆಯಂತೆ ಕಪ್ಪಾದ ಶರೀರಕಾಂತಿಯುಳ್ಳ ಸತಿಯ ಕೈಹಿಡಿದಿರುವೆ. ನಾನು ಶ್ಯಾಮವರ್ಣವುಳ್ಳವನಾಗಿದ್ದರೂ,ಶುಭ್ರ ಬಿಳಿವರ್ಣದವಳಾದ ಲಕ್ಷ್ಮಿಯನ್ನು ವಿವಾಹನಾಗಿರುವೆ. ಅಂದರೆ, ನಿಮ್ಮ ಪತಿಪತ್ನೀಭಾವವು ನಮ್ಮ ಪತಿಪತ್ನೀಭಾವದಂತೆ ವೃತಿರಿಕ್ತವಾಗಿವೆ. ನಾನು ಕಪ್ಪಗಿದ್ದರೂ, ಶ್ವೇತವರ್ಣದ ಲಕ್ಷ್ಮಿಯೊಂದಿಗೆ ಕಲೆತು ಒಂದಾಗಿ ಶೋಭಿಸುವಂತೆ, ನೀನೂ ಭಿನ್ನ ಬಣ್ಣದ ಸತಿಯೊಂದಿಗೆ ನನ್ನಂತೆಯೇ ಶೋಭಿಸುತ್ತಿರುವೆ. ಓ ಶಂಕರ, ಸತೀದೇವಿಯೊಡನೆ ಸತ್ಪುರುಷರಾ ದಂತಹ ದೇವತೆಗಳಿಗೂ ಮಾನವರಿಗೂ ಸಂಸಾರದುಃಖವನ್ನು ತಪ್ಪಿಸಿ
ಸದಾ ಮಂಗಳವನ್ನುಂಟುಮಾಡು. ನನ್ನದೊಂದು ಮಾತನ್ನು ನೆರವೇರಿಸಿ ಕೊಡು. ಸತೀದೇವಿಯನ್ನು ಪರಪುರುಷನಾದವನು ನೋಡಿಯಾಗಲಿ ಅಥವಾ ಅವಳ ಸೌಂದರ್ಯವನ್ನು ಕೇಳಿಯಾಗಲೀ ಕಾಮ ವಿಕಾರ ತೋರಿಸಿದರೆ ಅಂತಹವನ್ನು ಸಂಹರಿಸು’ ಎಂದು ವಿಷ್ಣು ವಿನಂತಿಸಿದ.

ಶಂಕರನು ಮಂದಹಾಸವನ್ನು ಸೂಸುತ್ತ ಹಾಗೆಯೇ ಆಗಲಿ ಎಂದು ಅಂಗೀಕರಿಸಿದ. ಶಿವನಿಂದ ವಾಗ್ದಾನ ಪಡೆದ ಹರಿ ತನ್ನ ಸ್ಥಾನಕ್ಕೆ ಬಂದು ಕುಳಿತು ಶಿವ-ಸತಿಯರ ವಿವಾಹ ಮಹೋತ್ಸವವನ್ನು ಸಾಂಗಗೊಳಿಸಿದ. ಆದರೆ, ಸತಿಯನ್ನು ಕಾಮಿಸಿದವರನ್ನು ಹರನು ಕೊಲ್ಲುವ ಸಮಾಚಾರ ವನ್ನು ಹರಿ ಬಹಿರಂಗಪಡಿಸಲಿಲ್ಲ.

ADVERTISEMENT

ಇತ್ತ ಬ್ರಹ್ಮ ಗೃಹ್ಯಸೂತ್ರದಲ್ಲಿ ಹೇಳಿರುವ ವಿಧಿಯಂತೆ ಶಿವಮತ್ತು ಸತೀದೇವಿಯರಿಗೆ ಸಂಪೂರ್ಣವಾಗಿ ವಿವಾಹಹೋಮ ಮುಂತಾದ ಅಗ್ನಿಕಾರ್ಯಗಳನ್ನು ಮಾಡಿಸಿದ. ಶಿವ ಮತ್ತು ಸತೀದೇವಿಯರು ಪುರೋ ಹಿತನಾದ ಬ್ರಹ್ಮನ ಅಪ್ಪಣೆಯಂತೆ ವಿಧಿವತ್ತಾಗಿ ಸಂತೋಷದಿಂದ ಅಗ್ನಿಗೆ ಪ್ರದಕ್ಷಿಣೆ ಮಾಡಿದರು. ಹೀಗೆ ಶಿವ-ಸತೀದೇವಿಯರವಿವಾಹ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಮದುವೆಗೆ ಬಂದವರೆ ಲ್ಲರಿಗೂ ಆನಂದವಾಗುವಂತೆ ಗಾನ-ನರ್ತನ, ನಾನಾವಾದ್ಯಗಳ ಸಂಗೀತ ಕಾರ್ಯಕ್ರಮ ನಡೆದವು.

ಆಗ ಅಲ್ಲಿ ಇನ್ನೊಂದು ಅತ್ಯಾಶ್ಚರ್ಯಕರವಾದ ಘಟನೆ ನಡೆಯಿತು. ಇಂಥ ಘಟನೆಗಳು ಶಂಕರನ ಮಾಯೆಯಿಂದಲ್ಲದೆ ಬೇರೆ ಯಾವುದರಿಂದಲೂ ನಡೆಯಲಾರದು. ಶಂಕರನ ಮಾಯೆಯನ್ನು ತಿಳಿ ಯಲು ಯಾರಿಗೂ ಸಾಧ್ಯವಿಲ್ಲ. ಶಿವಮಾಯೆಯಿಂದ ಸ್ಥಾವರಜಂಗಮ
ರೂಪವಾದ ಈ ಜಗತ್ತೆಲ್ಲವೂ ನಿರ್ಮಾಣಗೊಂಡಿದೆ. ಈ ಜಗತ್ತಿನೊಳ ಗಿರುವ ದೇವತೆಗಳು, ಅಸುರರು, ಮನುಷ್ಯರು ಮತ್ತಿತರ ಜೀವಿಗಳೆಲ್ಲ ಶಿವನಿಂದ ಮೋಹಗೊಳಿಸಲ್ಪಟ್ಟವರು. ಇದಕ್ಕೆ ಪಿತಾಮಹನಾದ ಬ್ರಹ್ಮ ಮತ್ತು ಜಗದ್ರಕ್ಷಕನಾದ ವಿಷ್ಣು ಸಹ ಅತೀತರಲ್ಲ.

ಯಾವ ಶಂಕರನನ್ನು ಹಿಂದೆ ಕಪಟದಿಂದ ಮೋಹಗೊಳಿಸಬೇಕೆಂದು ಕೊಂಡಿದ್ದನೋ ಆ ಬ್ರಹ್ಮನೇ ಶಂಕರನ ಮೋಹದ ಲೀಲಾಬಲೆಗೆ ಬಿದ್ದ. ಪರರಿಗೆ ಕೆಡುಕನ್ನು ಬಯಸಿದರೆ ಅದು ತನಗೇ ಬರುವುದು ಎಂಬುದು ಪರಮ ನಿಶ್ಚಯವಾದುದು. ಆದ್ದರಿಂದ ವಿವೇಕಿಯಾದವನು ಇದನ್ನು ತಿಳಿದುಕೊಳ್ಳಬೇಕು. ಪರರಿಗೆ ಕೆಡುಕನ್ನು ಮಾಡುವ ಯೋಚನೆ ಸಹ ಮಾಡಬಾರದು. ಶಿವನಿಗೆ ಕಾಮವಿಕಾರದ ಕೆಡುಕನ್ನು ಬಯಸಿದ್ದ ಬ್ರಹ್ಮ
ನಿಗೆ ಈಗ ಕಾಮವಿಕಾರವಾಗುವ ಕೇಡುಬುದ್ದಿ ಬಂದಿತು. ಅದೂ ಶಿವ ನೊಂದಿಗೆ ಸತೀದೇವಿಗೆ ವಿವಾಹ ಮಾಡಿಕೊಡುವಾಗಲೇ ಬ್ರಹ್ಮನಿಗೆ ಕಾಮವಿಕಾರ ಮೂಡಿತು. ಹೇಗೆಂದರೆ, ಶಿವನೊಂದಿಗೆ ಸತೀದೇವಿ ಅಗ್ನಿಗೆ ಪ್ರದಕ್ಷಿಣೆ ಮಾಡುವಾಗ, ಅವಳ ಪಾದವನ್ನಾವರಿಸಿದ್ದ ಸೀರೆಯು ಸ್ವಲ್ಪ ಸರಿದು ಅವಳ ಸುಂದರವಾದ ಪಾದಗಳು ಬ್ರಹ್ಮನಿಗೆ ಕಾಣಿಸಿದವು.

ಇಷ್ಟಕ್ಕೆ ಬ್ರಹ್ಮ ಮನ್ಮಥವಿಕಾರವನ್ನು ಹೊಂದಿದವನಾಗಿ ಸತೀದೇವಿಯ ಸುಂದರವಾದ ಮುಖ ನೋಡಬೇಕೆಂಬ ಆಸೆ ಹುಟ್ಟಿತು. ಅವನಲ್ಲಿ ಕಾಮವಿಕಾರವು ಹೆಚ್ಚಾಯಿತು. ಪತಿವ್ರತೆಯಾದ ಸತಿಯ ಪಾದವನ್ನಷ್ಟೇ ನೋಡಿ ಮನ್ಮಥವಿಕಾರವುಳ್ಳವನಾದ ಬ್ರಹ್ಮ, ಅವಳ ಮುಖವನ್ನು ನೋಡಲುದ್ಯುಕ್ತನಾದ. ಆದರೆ ಸತೀದೇವಿ ತನ್ನ ಮುಖವನ್ನು ಮುಚ್ಚಿಕೊಂಡಿದ್ದಳು. ಹೇಗಾದರೂ ಸತಿಯ ಮುಖವನ್ನು ನೋಡಲೇಬೇಕೆಂಬ ದುರಾಸೆಯಿಂದ ಬ್ರಹ್ಮ ಒಂದು ಉಪಾಯವನ್ನು ಮಾಡಿದ.l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.