ಮಂಗಳೂರು: ಚೆಂಡೆ, ಕಂಸಾಳೆಗಳ ಸದ್ದಿನ ಮಧ್ಯೆ ಭಕ್ತರ ಹರ್ಷೋದ್ಗಾರ, ಭಜನೆಗಳ ಸಂಭ್ರಮ, ಹುಲಿ ವೇಷಧಾರಿಗಳ ಕುಣಿತ, ಅನೇಕ ಧಾರ್ಮಿಕ, ಸಾಂಸ್ಕೃತಿಕ ಸ್ತಬ್ಧ ಚಿತ್ರಗಳು, ನೃತ್ಯರೂಪಕಗಳು, ಪರಂಪರೆಯನ್ನು ಬಿಂಬಿಸುವ ಟ್ಯಾಬ್ಲೋಗಳು, ತ್ರಿಶೂರಿನ ಬಣ್ಣದ ಕೊಡೆ.. ಹೀಗೆ ಮಂಗಳೂರಿನ ದಸರಾ ವೈಭವ ಶುಕ್ರವಾರ ಸಂಜೆ ಭವ್ಯ ಶೋಭಾಯಾತ್ರೆಯ ಮೂಲಕ ಅನಾವರಣಗೊಂಡಿತು.
ಕಂಗೊಳಿಸುವ ವಿದ್ಯುದ್ದೀಪಗಳಿಂದ ಅಲಂಕೃತವಾದ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಸಂಭ್ರಮಿಸುತ್ತಿದ್ದ ಸಾವಿರಾರು ಜನರು, ನವದುರ್ಗೆಯರ ಮೂರ್ತಿಗಳಿಗೆ ಭಕ್ತಿಯಿಂದ ಕೈಮುಗಿದು ಕೃತಾರ್ಥರಾದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ ಹೊರಟ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶಾರದಾಮಾತೆ, ಬ್ರಹ್ಮಶ್ರೀ ನಾರಾಯಣಗುರು, ಕೋಟಿ ಚೆನ್ನಯರ ವಿಗ್ರಹಗಳ ಸಹಿತ ವರ್ಣರಂಜಿತ ಬೃಹತ್ ಮಂಗಳೂರು ದಸರಾ ಮೆರವಣಿಗೆಯನ್ನು ಜನರು ಕಣ್ತುಂಬಿಕೊಂಡರು. ಶೋಭಾಯಾತ್ರೆ ಆರಂಭಕ್ಕೆ ಮೊದಲು ಶಾರದೆಯ ಸನ್ನಿಧಿಯಲ್ಲಿ ಬಿ.ಜನಾರ್ದನ ಪೂಜಾರಿಯವರು ಸೇವಾಕರ್ತನ್ನು ಸನ್ಮಾನಿಸಿದರು. 75ಕ್ಕೂ ಹೆಚ್ಚು ವೈವಿಧ್ಯಮಯ ಸ್ತಬ್ಧ
ಚಿತ್ರಗಳು, 100ಕ್ಕೂ ಅಧಿಕ ವೇಷ ಭೂಷಣಗಳು, ವಾದ್ಯ ಮೇಳಗಳು ಶೋಭಾಯಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.