ಮೈಸೂರು: ರೈತ ದಸರಾ ಕಾರ್ಯಕ್ರಮವು ಅ.6 ಹಾಗೂ 7ರಂದು ನಡೆಯಲಿದ್ದು, ಈ ಅಂಗವಾಗಿ ಆಯೋಜಿಸುವ ಹಾಲು ಕರೆಯುವ ಸ್ಪರ್ಧೆಯ ವಿಜೇತರು ಬರೋಬ್ಬರಿ ₹1 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಳ್ಳಲಿದ್ದಾರೆ.
ರೈತ ದಸರಾ ಉಪ ಸಮಿತಿ ಹೊರತಂದಿರುವ ಶ್ವಾನ ಪ್ರದರ್ಶನ ಹಾಗೂ ಅಧಿಕ ಹಾಲು ಕರೆಯುವ ಸ್ಪರ್ಧೆಗಳ ಪೋಸ್ಟರ್ಗಳನ್ನು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
‘ಜೆ.ಕೆ. ಮೈದಾನದಲ್ಲಿ ಅ.6 ಮತ್ತು 7ರಂದು ರಾಸುಗಳು, ಸಾಕು ಪ್ರಾಣಿಗಳ ಪ್ರದರ್ಶನ, ವಿವಿಧ ಕಾರ್ಯಕ್ರಮಗಳು ಇರಲಿವೆ’ ಎಂದು ಮಾಹಿತಿ ನೀಡಿದರು.
‘ಈ ಬಾರಿ ಹಾಲು ಕರೆಯುವ ಸ್ಪರ್ಧೆಯ ಬಹುಮಾನಗಳ ಮೊತ್ತವನ್ನು ದ್ವಿಗುಣಗೊಳಿಸಲಾಗಿದೆ. ಪ್ರಥಮ ಬಹುಮಾನವಾಗಿ ₹1 ಲಕ್ಷ, ದ್ವಿತೀಯ ಬಹುಮಾನ ₹80 ಸಾವಿರ, ತೃತೀಯ ಬಹುಮಾನ ₹60 ಸಾವಿರ, ನಾಲ್ಕನೇ ಬಹುಮಾನ ₹40 ಸಾವಿರ ನಿಗದಿ ಮಾಡಲಾಗಿದೆ. ರಾಜ್ಯದಾದ್ಯಂತ ಇರುವ ಹೈನುಗಾರರು ಪಾಲ್ಗೊಳ್ಳಬಹುದು. 6ರಂದು ಶ್ವಾನ ಪ್ರದರ್ಶನದಲ್ಲಿ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಳ್ಳಬೇಕು’ ಎಂದು ಕೋರಿದರು.
ರೈತ ದಸರಾ ಉಪಸಮಿತಿ ವಿಶೇಷಾಧಿಕಾರಿ ಡಾ.ಎಂ. ಕೃಷ್ಣಂರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ.ರವಿ, ಸಹ ಕಾರ್ಯದರ್ಶಿ ಡಾ.ನಾಗರಾಜು, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಎಚ್. ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.