ADVERTISEMENT

ಅಧಿಕಮಾಸದ ಆಚಾರ ವಿಚಾರ

ಹಿತ್ಲಳ್ಳಿ ಸೂರ್ಯನಾರಾಯಣ ಭಟ್ಟ
Published 2 ಅಕ್ಟೋಬರ್ 2020, 19:06 IST
Last Updated 2 ಅಕ್ಟೋಬರ್ 2020, 19:06 IST
pooja
pooja   

ಈ ವರ್ಷ ಅಂದರೆ ಶಾರ್ವರಿ ಸಂವತ್ಸರದಲ್ಲಿ ಆಶ್ವಿನಮಾಸವು ಅಧಿಕವಾಗಿ ಬಂದಿದೆ. ಈ ಕಾರಣದಿಂದ ಮಹಾಲಯ ಅಮಾವಾಸ್ಯೆಯ ನಂತರ ಆರಂಭವಾಗಬೇಕಿದ್ದ ನವರಾತ್ರಿಯು ಒಂದು ತಿಂಗಳ ಮುಂದೆ ಹೋಗಿದೆ. ಇದೇಕೆ ಹೀಗೆ – ಎಂದು ಕೆಲವರಿಗಾದರೂ ಅನಿಸದಿರದು. ಅದಕ್ಕಾಗಿ ಅಧಿಕಮಾಸದ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕಿದೆ.

ಪುರುಷೋತ್ತಮ ಮಾಸವೆಂದೂ ಹೇಳಲಾದ ಅಧಿಕಮಾಸವನ್ನು ಚಾಂದ್ರ ಸಂವತ್ಸರದಲ್ಲಿ ಗುರುತಿಸಲಾಗುತ್ತದೆ. ಸಂವತ್ಸರವೆಂದರೆ ಸಾಮಾನ್ಯವಾಗಿ 360 ದಿನಗಳಾದರೂ ಚಾಂದ್ರಮಾನ ಸಂವತ್ಸರದಲ್ಲಿ ಸಾಮಾನ್ಯವಾಗಿ 354 ದಿನಗಳಿರುತ್ತವೆ. ಅದರಂತೆ ಸೌರಮಾನದಲ್ಲಿ ಸುಮಾರು 365 ದಿವಸಗಳಿವೆ. ಹೀಗೆ ಒಂದು ವರ್ಷದಲ್ಲಿ ಚಾಂದ್ರ ಸಂವತ್ಸರಕ್ಕೂ ಸೌರ ಸಂವತ್ಸರಕ್ಕೂ ಸುಮಾರು 11 ದಿನಗಳ ಅಂತರವುಂಟಾಗುತ್ತದೆ. ಮೂರು ವರ್ಷಗಳಲ್ಲಿ ಈ ಅಂತರವು ಸುಮಾರು ಒಂದು ತಿಂಗಳಿಗೂ ಹೆಚ್ಚಾಗುತ್ತದೆ. ಅದನ್ನು ಸರಿಪಡಿಸಲು ಅಧಿಕಮಾಸವನ್ನು ಕಲ್ಪಿಸಲಾಗಿದೆ. ಇದರಿಂದ ಸೌರಮಾನ ಚಾಂದ್ರಮಾನಗಳು ಜೊತೆಯಾಗಿ ಸಾಗಲು ಅನುಕೂಲವಾಗುತ್ತದೆ. ಸೌರಮಾನದಲ್ಲಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳು ನಿಯತವಾಗಿದೆ. ಆದರೆ ಚಾಂದ್ರ
ಮಾನದಲ್ಲಿ ಅಧಿಕಮಾಸವಿರುವಾಗ ಒಂದು ವರ್ಷದಲ್ಲಿ ಹದಿಮೂರು
ಮಾಸಗಳಿರುತ್ತವೆ.

ಒಂದು ಅಧಿಕ ಮಾಸದಿಂದ ಇನ್ನೊಂದು ಅಧಿಕ ಮಾಸಕ್ಕೆ ಸುಮಾರು 32 ತಿಂಗಳ ಅಂತರವಿರುತ್ತದೆ. ವಸಿಷ್ಠ ಸಿದ್ಧಾಂತದಲ್ಲಿ ಅದನ್ನು ಸೂಕ್ಷ್ಮವಾಗಿ 32 ತಿಂಗಳು 16 ದಿನ 192 ನಿಮಿಷ ಎನ್ನಲಾಗಿದೆ. ಈ ಆಶ್ವಿನ ಮಾಸ(2020)ದ ಮೊದಲು, 32 ತಿಂಗಳ ಹಿಂದೆ ಅಧಿಕಮಾಸ ಬಂದಿತ್ತು (ಮೇ-ಜೂನ್ 2018). ಅದರಂತೆ ಮುಂದೆ 32 ತಿಂಗಳಾದ ಮೇಲೆ ಅಧಿಕ ಮಾಸ ಬರಲಿದೆ. ಅಧಿಕ ಮಾಸದ ಸಮಯವನ್ನು ಪ್ರಾರ್ಥನೆ ಉಪವಾಸ ದಾನ ಮುಂತಾದವುಗಳಿಗಾಗಿ ಉಪಯೋಗಿಸುವ ರೂಢಿಯಿದೆ.

ADVERTISEMENT

ಸೂರ್ಯನು ಸುಮಾರು ಒಂದು ತಿಂಗಳ ಕಾಲ ಮೇಷಾದಿ ರಾಶಿಯಲ್ಲಿ ಕಾಣುತ್ತಾನೆ. ಒಂದನ್ನು ಬಿಟ್ಟು ಇನ್ನೊಂದು ರಾಶಿಯಲ್ಲಿ ಕಾಣುವ ಸಮಯವನ್ನು ಸಂಕ್ರಾಂತಿಯೆನ್ನುತ್ತಾರೆ. ಸಾಮಾನ್ಯವಾಗಿ ಚೈತ್ರಾದಿಮಾಸದಲ್ಲಿ ಸಂಕ್ರಾಂತಿಯು ಬಂದೇ ಬರುತ್ತದೆ. ಆದರೆ ಸುಮಾರು 30 ತಿಂಗಳುಗಳಾದ ಮೇಲೆ ಒಂದು ಮಾಸದಲ್ಲಿ ಎರಡು ಅಮಾವಾಸೆಗಳ ನಡುವೆ ಸೂರ್ಯ ಸಂಕ್ರಾಂತಿಯಿರುವುದಿಲ್ಲ. ಸಂಕ್ರಾಂತಿಯಿಲ್ಲದ ಈ ಮಾಸವನ್ನು ಅಧಿಕಮಾಸವೆನ್ನುತ್ತಾರೆ. ಈ ವರ್ಷ ಕನ್ಯಾ ಮಾಸ ಭಾದ್ರಪದ ಬಹುಳ ಚತುರ್ದಶಿಯಂದು ಆರಂಭವಾಗಿದೆ(16.9.20). ಅದು 31 ದಿವಸಗಳಿಗೆ ಮುಗಿಯುತ್ತದೆ (16.10.20). ಈ ದಿನಗಳ ನಡುವೆ 29 ದಿವಸದ ಒಂದು ಚಾಂದ್ರಮಾಸ ಕಳೆದು ಹೋಗುತ್ತದೆ. ಅದನ್ನು ಅಧಿಕ ಆಶ್ವಿನಮಾಸ ಎನ್ನಲಾಗಿದೆ. ತುಲಾ ಸಂಕ್ರಾಂತಿಯು ಮುಂದಿನ ಚಾಂದ್ರಮಾಸದಲ್ಲಿದ್ದು ಅದನ್ನು ನಿಜ ಆಶ್ವಿನ ಎನ್ನಲಾಗಿದೆ. ನವರಾತ್ರಿಯನ್ನು ನಿಜ ಆಶ್ವಿನಮಾಸದಲ್ಲಿ ಆಚರಿಸಲಾಗುವುದು.

ಅನಿವಾರ್ಯವಾದ ನಿತ್ಯ ನೈಮಿತ್ತಿಕ ಕರ್ಮಗಳನ್ನು ಅಧಿಕ ಮಾಸದಲ್ಲಿಯೂ ಮಾಡಬಹುದು. ಅದು ಅನಿವಾರ್ಯವಲ್ಲ
ಎಂದಾದರೆ ಅಧಿಕ ಮಾಸದಲ್ಲಿ ಮಾಡಬಾರದು. ಉದಾಹರಣೆಗಾಗಿ ಸಂಧ್ಯೋಪಾಸನೆಯು ನಿತ್ಯಕರ್ಮಗಳಲ್ಲೊಂದು. ಅದನ್ನು ಅಧಿಕಮಾಸವೆಂದು ಬಿಡುವಂತಿಲ್ಲ. ಆದರೆ ನಿತ್ಯವಾದ ಜ್ಯೋತಿಷ್ಟೋಮ ಯಾಗವನ್ನು ಅಧಿಕಮಾಸದಲ್ಲಿ ಮಾಡಬಾರದು. ಅದನ್ನು ಶುದ್ಧ ಮಾಸದಲ್ಲಿಯೇ ಮಾಡಬೇಕು.

ಅನಿವಾರ್ಯ ಎಂಬ ಶಬ್ದವನ್ನು ಹೇಳಿರುವುದರಿಂದ ಅಧಿಕ ಮಾಸದಲ್ಲಿ ಮಾಡದಿದ್ದರೆ ತೊಂದರೆಯಾಗಬಹುದಾದ ಕಾರ್ಯಗಳನ್ನೇ ಮಾಡಬೇಕೆಂದು ಹೇಳಲಾಗಿದೆ. ಉದಾಹರಣೆಗಾಗಿ, ದೇವಾಲಯದಲ್ಲಿ ಕೆಲವು ಕರ್ಮಗಳನ್ನು ಮಾಡದಿದ್ದರೆ ಪೂಜೆಯ ಲೋಪವುಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಪ್ರತಿಷ್ಠಾ ಕಾರ್ಯವನ್ನು ಮಾಡಲು ಅನುಮತಿಸಲಾಗಿದೆ. ಅನ್ನಪ್ರಾಶನಾಂತ ಸಂಸ್ಕಾರಗಳನ್ನು ಅಧಿಕ ಮಾಸದಲ್ಲಿಯೂ ಮಾಡಬಹುದು.ಪುತ್ರ ಜನನವಾದಾಗ ಜಾತೇಷ್ಟಿಯೆಂಬ ಒಂದು ಕರ್ಮವನ್ನು ವಿಧಿಸಲಾಗಿದೆ. ಅಧಿಕಮಾಸದಲ್ಲಿ ಅದನ್ನು ಮಾಡಲಾಗದು.

ಅಧಿಕ ಮಾಸವು ವಿಷ್ಣುವಿಗೆ ಪ್ರಿಯವಾದ ಸಮಯವಾಗಿದ್ದು ಅದನ್ನು ಪುರುಷೋತ್ತಮ ಮಾಸ ಎಂದೇ ಹೆಸರಿಸಲಾಗಿದೆ.

ಜ್ಯೋತಿಷ ಮತ್ತು ಧರ್ಮಶಾಸ್ತ್ರ

ಜ್ಯೋತಿಷದ ಆಧಾರದ ಮೇಲೆ ಅಧಿಕಮಾಸವು ಸಿದ್ಧವಾದ ಮೇಲೆ, ಧರ್ಮಶಾಸ್ತ್ರವು ಅದನ್ನು ಅವಲಂಬಿಸಿ ಕೆಲವು ವಿಧಿ ನಿಷೇಧಗಳನ್ನು ತಿಳಿಸುತ್ತದೆ. ಯಾರನ್ನೂ ಹೆದರಿಸುವುದಾಗಲಿ ಅಥವಾ ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಲಿ ಅದರ ಉದ್ದೇಶವಲ್ಲ. ಪ್ರಲೋಭನೆಯಿಂದ ಆಗಬೇಕಾದುದು ಏನೂ ಇಲ್ಲ. ಎಲ್ಲ ಶಾಸ್ತ್ರಗಳಂತೆ ಧರ್ಮಶಾಸ್ತ್ರವು ತನ್ನದೇ ಆದ ಒಂದು ದಾರಿಯನ್ನು ತೋರಿಸುತ್ತದೆ. ಶ್ರದ್ಧೆಯಿರುವವರು ಅದನ್ನು ಆಚರಿಸುತ್ತಾರೆ. ನಂಬಿಗೆಯಿಲ್ಲದವರು ಅದನ್ನು ಬಿಟ್ಟುಬಿಡುತ್ತಾರೆ. ಆದರೆ ಭಾರತೀಯ ಪರಂಪರೆಯಲ್ಲಿ ಅದನ್ನು ನಂಬಿಕೊಂಡು ಬಂದವರೇ ಹೆಚ್ಚು. ಕೋರೋನಾದಂತಹ ಸನ್ನಿವೇಶದಲ್ಲಿ ಅದನ್ನು ಯಾರೂ ಸೃಷ್ಟಿಸಿಲ್ಲ. ಅದಕ್ಕೆ ದರ್ಶನ ಹಾಗೂ ತರ್ಕಶಾಸ್ತ್ರದ ದೃಢವಾದ ಹಿನ್ನೆಲೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.