ADVERTISEMENT

ಕೊಪ್ಪಳ: ಸಾಮಾಜಿಕ ಕಳಕಳಿಯ ಗವಿಮಠದ ಜಾತ್ರಾ ಮಹೋತ್ಸವ

ಮಹಾರಥೋತ್ಸವ ಇಂದು: ದಾಸೋಹ ಮಂಟಪದಲ್ಲಿ ಪ್ರಸಾದಕ್ಕೆ ಸಿದ್ಧತೆ

ಸಿದ್ದನಗೌಡ ಪಾಟೀಲ
Published 11 ಜನವರಿ 2020, 19:45 IST
Last Updated 11 ಜನವರಿ 2020, 19:45 IST
ಕೊಪ್ಪಳ ಗವಿಮಠದ ಆವರಣದಲ್ಲಿ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಲಘು ರಥೋತ್ಸವ (ಉಚ್ಛಾಯ) ಕಾರ್ಯಕ್ರಮ ನಡೆಯಿತು
ಕೊಪ್ಪಳ ಗವಿಮಠದ ಆವರಣದಲ್ಲಿ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಲಘು ರಥೋತ್ಸವ (ಉಚ್ಛಾಯ) ಕಾರ್ಯಕ್ರಮ ನಡೆಯಿತು   

ಕೊಪ್ಪಳ: ತ್ರಿವಿಧ ದಾಸೋಹವನ್ನು ಕಳೆದ 10 ಶತಮಾನಗಳಿಂದ ನಡೆಸಿಕೊಂಡು ಬಂದ ಗವಿಮಠದ ಜಾತ್ರೆ ರಾಜ್ಯದಲ್ಲಿಯೇ ವಿಶಿಷ್ಟ. ಸಮಕಾಲೀನ ಸಮಸ್ಯೆಗಳ ಜೊತೆಭಕ್ತರ ಹಿತ ಚಿಂತನೆ, ನಾಡಿನ ಅಭ್ಯುದಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

ಬಸವ ಪೂರ್ವಯುಗದಲ್ಲಿ ಕಾಶಿಯಿಂದ ಬಂದ ರುದ್ರಮುನಿ ಶಿವಯೋಗಿಗಳಿಂದ ಆರಂಭವಾದಮಹಾದಾಸೋಹ ಪೀಠಪರಂಪರೆಯ ಎಲ್ಲ ಶ್ರೀಗಳು ತಮ್ಮ ಶಕ್ತಿಸಾಮರ್ಥ್ಯಕ್ಕೆ ತಕ್ಕ ಹಾಗೆ ಮಠವನ್ನು ಬೆಳೆಸಿಕೊಂಡು ಬಂದಿದ್ದಾರೆ.ಆಧುನಿಕ ಕಾಲದ ಸ್ಥಿತ್ಯಂತರಗಳ ಮಧ್ಯೆಯೂ ಮಠದ ಹಿರಿಮೆಯನ್ನು ತಮ್ಮ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಪ್ರಸ್ತುತ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮುನ್ನೆಡೆಸಿಕೊಂಡು ಬಂದಿದ್ದಾರೆ.

ಭಕ್ತಿ, ಅಧ್ಯಾತ್ಮ, ಸಾಮಾಜಿಕ ಕಳಕಳಿ, ಮನೋರಂಜನೆ, ಸಾಂಸ್ಕೃತಿಕ ಭವ್ಯ ರಥದ ಜೊತೆಗೆ ಜನಜೀವನ ಸುಧಾರಿಸುವ ಈ ಜಾತ್ರೆ ವಿಶೇಷವಾದದು. ಗುಡ್ಡ, ಬೆಟ್ಟ, ಕಲ್ಲುಬಂಡೆಗಳ ಪ್ರಾಕೃತಿಕ ಸೌಂದರ್ಯದ ಗಣಿಯಾಗಿರುವ ಶ್ರೀಮಠ ಭಕ್ತರ ಕಾಮಧೇನುವಾಗಿದೆ. ಬರುವ ಭಕ್ತರಿಗೆ ಅಂತ್ರ, ತಂತ್ರ, ಚೀಟಿ, ಪುಡಿಯನ್ನು ನೀಡದೇ ಆಯುರ್ವೇದ ಮಹತ್ವ, ಆರೋಗ್ಯದ ಸಮಸ್ಯೆ ಪರಿಹರಿಸುವ ದೈಹಿಕ, ಮನೋವೇದನೆ ಕಳೆಯುವ ಮಠವಾಗಿದೆ.

ADVERTISEMENT

ಕ್ರಿ. ಶ. 273ರಲ್ಲಿ ಅಶೋಕ ಚಕ್ರವರ್ತಿಯ ಶಾಸನ, ಪ್ರಾಚೀನ ಶಿಲಾಯುಗದ ಗವಿಶಿಲ್ಪಗಳು, ನಿಸರ್ಗ ನಿರ್ಮಿತ ಗುಹೆ, ಮಠ, ಮಂದಿರ, ಮಸೀದಿಗಳಿಂದ ಭವ್ಯ ಪ್ರಾಚೀನತೆಗೆ ಸಾಕ್ಷಿಯಾಗಿವೆ.

ವಿದ್ಯುತ್ ದೀಪಾಲಂಕಾರ

ಜಾತ್ರೆಯ ಪ್ರಯುಕ್ತ ಗವಿಮಠದ ತೇರಿನ ಮೈದಾನ, ಗರ್ಭಗುಡಿ, ಶರಣರ ಗದ್ದುಗೆ, ಬೆಟ್ಟ, ಶಿಖರಗಳಿಗೆ ಕಣ್ಣು ಕೋರೈಸುವಂತೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಠಕ್ಕೆ ಸೇರಿದಂ ಶಿಕ್ಷಣ ಸಂಸ್ಥೆಗಳು ನವವಧುವಿನಂತೆ ಶಿಂಗಾರಗೊಂಡಿವೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆ ಬಂಡೆಗಲ್ಲುಗಳ ಹಿನ್ನೆಲೆಯಲ್ಲಿ ವೇದಿಕೆ ಅಲಂಕಾರ ಮುದ ನೀಡುವಂತೆ ಅಲಂಕರಿಸಲಾಗಿದೆ.

ಜಾತ್ರೆಯ ಧಾರ್ಮಿಕ ಕಾರ್ಯಕ್ರಮ

ಜಾತ್ರೆ ಅಂಗವಾಗಿ ನಿತ್ಯ ಗವಿಸಿದ್ಧೇಶನಿಗೆ ರುದ್ರಾಭಿಷೇಕ ನಡೆಯುತ್ತದೆ. ಬಸವ ಪಟ ಆರೋಹಣದೊಂದಿಗೆ ಜಾತ್ರೆಗೆ ಚಾಲನೆ ದೊರಕಲಿದೆ. ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ಕಳಸದ ಮೆರವಣಿಗೆ, ಅನ್ನಪೂರ್ಣೇಶ್ವರಿದೇವಿಗೆ ಉಡಿ ತುಂಬುವ ಕಾರ್ಯಕ್ರಮ. ತೇರಿನ ಹಗ್ಗದ ಮೆರವಣಿಗೆ, ಲಘುರಥೋತ್ಸವ, ಮಹಾರಥೋತ್ಸವ, ಬಳಗಾನೂರ ಶರಣರ ದೀರ್ಘದಂಡ ನಮಸ್ಕಾರ ಜಾತ್ರೆಯ ಪ್ರಮುಖ ಧಾರ್ಮಿಕ ಕ್ರಿಯೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.