ADVERTISEMENT

ದೇವಿಯ ಆರಾಧನೆಯೇ ಶರನ್ನವರಾತ್ರಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 13:48 IST
Last Updated 1 ಅಕ್ಟೋಬರ್ 2021, 13:48 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ಶರನ್ನವರಾತ್ರಿ ಎಂದರೆ ದೇವಿಯ ಆರಾಧನೆ. ಸೃಷ್ಟಿ, ಸ್ಥಿತಿ, ಲಯಗಳಿಗೆ ಇವಳೇ ಕಾರಣಳು. ಮಹಾವಿದ್ಯೆಯೂ, ಮಹಾ ಮೋಹಳೂ ಆಗಿರುತ್ತಾಳೆ. ಇವಳೇ ಸರ್ವಕ್ಕೂ ಕಾರಣಳಾಗಿ ಗುಣತ್ರಯವನ್ನು ಕಾರ್ಯ ರೂಪಕ್ಕೆ ತಂದಿರುತ್ತಾಳೆ. ಬುದ್ಧಿಯ ವೃತ್ತಿಗಳೆಲ್ಲ ದೇವಿಯ ರೂಪಗಳೇ. ನಾನಾ ಆಯುಧಗಳನ್ನು ಧರಿಸಿ ಭಯಂಕರಳಾಗಿ ಕಂಡುಬಂದರೂ ಜಗನ್ಮಾತೆಯು ಸೌಮ್ಯರೂಪಳು, ಅತಿ ಸುಂದರಿಯು ಆಗಿದ್ದಾಳೆ. ದುರ್ಗಮವಾದ ಭವಸಾಗರವನ್ನು ದಾಟಿಸುವ ನೌಕೆಯು ಈ ದುರ್ಗಾದೇವಿ.

ದೇವಿಯು ಭಕ್ತ ಜನರಲ್ಲಿ ಪ್ರಸನ್ನಳಾದರೆ ಅವರು ಯಶಸ್ಸಿಗೆ ಭಾಗಿಗಳಾಗುತ್ತಾರೆ. ಪುರುಷಾರ್ಥಗಳು ಬರುತ್ತವೆ. ವಿನಯವಂತರಾದ ಪತ್ನಿ, ಪುತ್ರ ಮತ್ತು ಸೇವಕರಿಂದ ಧನ್ಯರಾಗುವರು. ಕಷ್ಟದಲ್ಲಿ ಅವಳನ್ನು ಸ್ಮರಿಸಿಕೊಂಡರೆ ಭೀತಿಯನ್ನು ನಿವಾರಿಸುತ್ತಾಳೆ. ಸುಖದಲ್ಲಿರುವಾಗ ಸ್ಮರಿಸಿಕೊಂಡರೆ ಶುಭ ಬುದ್ಧಿಯನ್ನು ಕೊಡುತ್ತಾಳೆ. ಇವಳಿಗಿಂತ ದಯಾ ಹೃದಯವುಳ್ಳವರು ಮತ್ತಾರೂ ಇಲ್ಲ. ಹೃದಯದಲ್ಲಿ ಅನುಕಂಪ, ಸಮರದಲ್ಲಿ ನಿಷ್ಠುರತೆ ಇವೆರಡರ ಸಂಗಮ ದೇವಿಯಲ್ಲಿ ಹೊರತು ಇನ್ನೆಲ್ಲಿಯೂ ಕಂಡು ಬರುವುದಿಲ್ಲ. ಜಗದಂಬಿಕೆಯನ್ನು ಯಾರು ಭಕ್ತಿಯಿಂದ ಸ್ತುತಿಸುತ್ತಾರೆಯೋ ಅವರ ಸಮೃದ್ಧಿಗೆ ಅವಳು ಕಾರಣಳಾಗುತ್ತಾಳೆ.

ಅವಳ ಮಾಯಾ ರೂಪದಿಂದ ವಿಶ್ವವು ಮೋಹವನ್ನು ಹೊಂದಿದ್ದರೂ ಅವಳು ಪ್ರಸನ್ನಳಾದರೆ ಭಕ್ತಿ-ಮುಕ್ತಿಯನ್ನೂ ಅನುಗ್ರಹಿಸುತ್ತಾಳೆ. ಅವಳನ್ನು ಆಶ್ರಯಿಸಿದವರಿಗೆ ವಿಪತ್ತಿಲ್ಲ. ಅಷ್ಟೇ ಅಲ್ಲ, ಅವರೂ ಕೂಡ ಇತರರಿಗೆ ಆಶ್ರಯದಾತರಾಗುತ್ತಾರೆ. ಶರನ್ನವರಾತ್ರಿಯ ಈ ವಿಶೇಷ ಪರ್ವಕಾಲದಲ್ಲಿ ನಾವೆಲ್ಲರೂ ದೇವಿಯ ಕೃಪೆಗೆ ಪಾತ್ರರಾಗೋಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.