ADVERTISEMENT

ಶಿವರಾತ್ರಿ ಸಡಗರ; ಶಿವ ನಾಮಸ್ಮರಣೆ

ಶಿವಾಲಯಗಳಲ್ಲಿ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:13 IST
Last Updated 22 ಫೆಬ್ರುವರಿ 2020, 10:13 IST
ಚಿಕ್ಕಮಗಳೂರಿನ ಬೋಳರಾಮೇಶ್ವರ ದೇಗುಲದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.
ಚಿಕ್ಕಮಗಳೂರಿನ ಬೋಳರಾಮೇಶ್ವರ ದೇಗುಲದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.   

ಚಿಕ್ಕಮಗಳೂರು: ನಗರದಲ್ಲಿ ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ಶಿವರಾತ್ರಿ ಆಚರಿಸಲಾಯಿತು. ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಬೋಳರಾಮೇಶ್ವರ, ಓಂಕಾರೇಶ್ವರ, ಕಾಮಧೇನು ಗಣಪತಿ, ಹಿರೇಮಗಳೂರಿನ ಮಲ್ಲಿಕಾರ್ಜುನಸ್ವಾಮಿ, ಪಾತಾಳೇಶ್ವರಸ್ವಾಮಿ ದೇಗುಲ ಸಹಿತ ವಿವಿಧ ದೇಗುಲಗಳಲ್ಲಿ ವಿಶೇಷ ಅಭಿಷೇಕ, ಬಿಲ್ವಾರ್ಚನೆ, ಅಲಂಕಾರ, ಶಿವಾರಾಧನೆ, ಭಜನೆ, ಶಿವನಾಮ ಸ್ಮರಣೆ ಜರುಗಿತು.

ಬೆಳಿಗ್ಗೆಯಿಂದಲೇ ಶಿವಾಲಯಗಳಲ್ಲಿ ಭಕ್ತರ ದಟ್ಟಣೆ ಇತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರಮೂರ್ತಿಗಳ ದರ್ಶನ ಪಡೆದರು. ಹೂ, ಹಣ್ಣುಕಾಯಿ, ಹಾಲು, ಬಿಲ್ವಪತ್ರೆ ಸಮರ್ಪಿಸಿ ಭಕ್ತಿ ಭಾವಮೆರೆದರು. ನಗರದಲ್ಲಿ ಹಬ್ಬದ ಸಡಗರ ಮೇಳೈಸಿತ್ತು. ಮನೆಗಳನ್ನು ತಳಿರು–ತೋರಣಗಳಿಂದ ಅಲಂಕರಿಸಲಾಗಿತ್ತು.

ADVERTISEMENT

ಚಿತ್ರಪಟ ಮತ್ತು3ಡಿ ಶಿವಲಿಂಗ ಪ್ರದರ್ಶನ: ಪ್ರಜಾಪಿತ ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಆಧ್ಯಾತ್ಮಿಕ ಚಿತ್ರಪಟ ಮತ್ತು 3ಡಿ ಶಿವಲಿಂಗ, ಪಂಚಲಿಂಗ ಪ್ರದರ್ಶನ ಆಯೋಜಿಸಲಾಗಿತ್ತು. ಆತ್ಮ, ಪರಮಾತ್ಮನ ಬಗ್ಗೆ ಸಂಸ್ಥೆಯ ಸ್ವಯಂ ಸೇವಕರು ಜನರಿಗೆ ಮಾಹಿತಿ ನೀಡಿದರು.

‘ಬೋಳರಾಮೇಶ್ವರ ದೇಗುಲದಲ್ಲಿ ಶುಕ್ರವಾರ ಸಂಜೆ 5ರಿಂದ ಶನಿವಾರ ಬೆಳಿಗ್ಗೆ 6.30ರವರೆಗೆ ಜಾಗರಣೆ ನಡೆಯಲಿದೆ. ನಾಲ್ಕುಯಾಮಗಳ ಅಭಿಷೇಕ, ಪೂಜೆ ಜರುಗಲಿದೆ. ಜಾಗರಣೆಯಲ್ಲಿ ಭಜನೆ, ಹರಿಕಥೆಗಿಂತ ಪೂಜಾ ಕೈಂಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ’ಎಂದು ದೇಗುಲದ ಪ್ರಧಾನ ಅರ್ಚಕ ಕುಮಾರಸ್ವಾಮಿ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪವಾಸ ಮತ್ತು ಜಾಗರಣೆ ಶಿವರಾತ್ರಿಯ ವಿಶೇಷ. ಬೆಳಿಗ್ಗೆ ಮನೆ ಸ್ವಚ್ಛಗೊಳಿಸಿ ಮನೆಮಂದಿಯಲ್ಲ ಮಡಿಬಟ್ಟೆ ತೊಟ್ಟು ದೇವರ ಪೂಜೆ ಮಾಡುತ್ತೇವೆ. ಸಮೀಪದ ಶಿವ ದೇಗುಲಕ್ಕೆ ಹೋಗಿ ಬರುತ್ತೇವೆ. ಸಂಜೆ ಹೋಳಿಗೆ, ಪಾಯಸ ಸಹಿತ ವಿಶೇಷ ಖಾದ್ಯಗಳನ್ನು ಮಾಡುತ್ತೇವೆ’ಎಂದು ಕಲ್ಯಾಣನಗರದ ಶೀಲಮ್ಮ ಹೇಳಿದರು.

ಮುಂಜಾಗ್ರತೆಯಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.