ಕಲ್ಯಾಣದ ಶರಣರು ತಮ್ಮ ಅನುಭಾವ ಹಾಗೂ ಜ್ಞಾನದಿಂದ ಮನುಷ್ಯರ ಮನೋಬಲವನ್ನು ಹೆಚ್ಚಿಸಲು ಶ್ರಮ ಪಟ್ಟರು. ಆದ್ದರಿಂದ ಕಲ್ಯಾಣದ ಶರಣರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ.
ಅದಕ್ಕೆಂದೆ ಶರಣರು ಮನಸ್ಸನ್ನು ಮಂಗನಿಗೆ ಹೋಲಿಸಿ ‘ಮರ್ಕಟ’ ಎಂದರು. ಅದಕ್ಕೆ ಸಾಕ್ಷಿ ಅಕ್ಕಮಹಾದೇವಿ, ಕೌಶಿಕನ ಮನದ ವಿಕೃತವನ್ನು ಕಂಡು ‘ಲೋಕದಾ ಚೇಷ್ಟೆಗೆ ರವಿ ಬೀಜವಾದಂತೆ ಕರ್ಣಂಗಳ ಚೇಷ್ಟೆಗೆ ಮನವೇ ಬೀಜ...’ ಎಂದಳು.
ಪ್ರತಿಯೊಬ್ಬ ಮನುಷ್ಯನ ಏಳಿಗೆಗೆ ಮತ್ತು ಅದೋಗತಿಗೆ ಮನುಸ್ಸು ಮುಖ್ಯ ಕಾರಣವಾಗಿದೆ. ವಾಸ್ತವದಲ್ಲಿ ಇಂದು ನಡೆಯುತ್ತಿರವ ಘಟನೆಗಳಿಗೆ ಒಂದಲ್ಲ ಒಂದು ರೀತಿಯಿಂದ ಮನಸ್ಸು ಕಾರಣವಾಗಿರುತ್ತದೆ.
‘ಹರಿವ ಹಾವಿಗಂಜೆ, ಉರಿವ ನಾಲಿಗೆಗಂಜೆ, ಕತ್ತಿಯ ಮೊನೆಗಂಜೆ...’ ಎಂದು ಶರಣರು ಮನಸ್ಸಿನ ಗಟ್ಟಿತನವನ್ನು ಇಲ್ಲಿ ಪ್ರದರ್ಶಿಸುತ್ತಾರೆ.
ಮನಸ್ಸು ತನ್ನಲ್ಲಿಯ ಸ್ವರ್ಗವನ್ನು ನರಕವನ್ನಾಗಿಯೂ, ನರಕವನ್ನು ಸ್ವರ್ಗವನ್ನಾಗಿಯೂ ಮಾಡಿಕೊಳ್ಳಬಹುದು. ಮನಸ್ಸು ವ್ಯಕ್ತಿಯೊಳಗಿದ್ದರೂ, ಮೇಲಾಧಿಕಾರಿಯಂತೆ ಅದು ವ್ಯಕ್ತಿಯ ಮೇಲೆ ಅಧಿಕಾರ ನಡೆಸುತ್ತದೆ. ಅಂದುಕೊಂಡಂತೆ ಮನಸ್ಸನ್ನು ಹರಿಬಿಡುವ ಅವಕಾಶ ಮನುಷ್ಯನಿಗಿರುವುದರಿಂದಲೆ ದೇವರು ಮನುಷ್ಯನಿಗೆ ರೆಕ್ಕೆಗಳನ್ನು ಕೊಟ್ಟಿಲ್ಲ. ಮುರಿದ ಮನೆಯನ್ನು ಕಟ್ಟಬಹುದು ಮುರಿದ ಮನಸ್ಸನ್ನು ಕಟ್ಟುವದು ಹೇಗೆ? ಅದನ್ನೇ ಶರಣರ ಜೀವನದಿಂದ ತಿಳಿಯಬಹುದು.
ಈ ಪ್ರಪಂಚದಲ್ಲಿ ಮನಸಸನ್ನು ಶಕ್ತಯನ್ನಾಗಿ ಮಾಡಿಕೊಂಡವರು ವಿಭೂತಿಪುರುಷರಾಗಿದ್ದಾರೆ. ಬಸವಣ್ಣ ಭೂತಿ, ಸಂಗನಬಸವ ವಿಭೂತಿ. ನರೇಂದ್ರ ಭೂತಿ, ಸ್ವಾಮಿ ವಿವೇಕಾನಂದ ವಿಭೂತಿ. ಮಹಾದೇವಿ ಭೂತಿ, ಅಕ್ಕ ಮಹಾದೇವಿ ವಿಭೂತಿ.
ಸಂಗ್ರಹ: ಎಂ.ಬಿ.ಕಟ್ಟಿಮನಿ
(ವಿಜಯಪುರದ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಶ್ರಾವಣಮಾಸದ ಪ್ರವಚನಸಾರ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.