ADVERTISEMENT

ಯುವಜನತೆ ಮತ್ತು ಸ್ವಾಮಿ ವಿವೇಕಾನಂದ

ಇಂದು ಜನ್ಮದಿನ

ರಘು ವಿ
Published 11 ಜನವರಿ 2020, 20:47 IST
Last Updated 11 ಜನವರಿ 2020, 20:47 IST
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ   

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರ ಭಾರತದ ವಿವಾದಾತೀತ ವ್ಯಕ್ತಿತ್ವಗಳಲ್ಲಿ ಮೊದಲ ಸಾಲಿನಲ್ಲಿ ಗುರುತಿಸಲ್ಪಡುವವರು ಸ್ವಾಮಿ ವಿವೇಕಾನಂದರು.

1863ರಲ್ಲಿ ಜನಿಸಿ ಕಲ್ಕತ್ತದ ದತ್ತ ಮನೆತನದ ಕಣ್ಮಣಿಯಾಗಿದ್ದ ನರೇಂದ್ರನಾಥ ದತ್ತ ಅಂದಿನ ಯುವಜನತೆಯಂತೆ ಆಧುನಿಕ ವಿದ್ಯಾಭ್ಯಾಸ ಪಡೆದು ಇಹಪ್ರಪಂಚದ ಜೀವನಕ್ಕೆ ಸನ್ನದ್ಧನಾಗುತ್ತಿದ್ದನಾದರೂ ಒಳಗೊಂದು ಆಂತರಿಕ ತುಡಿತ ಕಾಡುತ್ತಿತ್ತು. ಹಿಂದೆ ಬುದ್ಧನಿಗಾದಂತೆ ಮುಂದೆ ಕರಮಚಂದ ಗಾಂಧಿಗಾಗುವಂತೆ ಸಂಕುಚಿತ, ಸ್ವಾರ್ಥ ಬದುಕಿನಾಚೆಗೆ ಉತ್ತರಗಳಡಗಿರಬಹುದೆಂಬ ಶಂಕೆ ಕಾಡುತ್ತಿತ್ತು. ಅದನ್ನು ದೇವರೆಂದು ಕರೆಯುವುದಾದರೆ ಅಂತಹ ದೇವರನ್ನು ಕಾಣುವುದು ಹೇಗೆ? ಕಂಡವರು ಉಂಟೆ? ಮೊದಲಾದ ಉಪಪ್ರಶ್ನೆಗಳು ಹುಟ್ಟಿದವು.

ಗ್ರಾಂಥಿಕವಾಗಿ ಅವುಗಳಿಗೆ ದೊರೆತ ಉತ್ತರಗಳು ಸಮಾಧಾನ ನೀಡದ ಕಾರಣ, ದೇವರನ್ನು ಕಂಡವರೆಂದವರ ಬಳಿಯೆಲ್ಲ‌ ನರೇಂದ್ರ ತನ್ನ ಪ್ರಶ್ನೆಯ ಬಾಣ: ‘ಮಹಾಶಯರೆ, ದೇವರಿದ್ದಾನೆಯೆ? ನೀವು ದೇವರನ್ನು ಕಂಡಿರುವಿರಾ?’ ಎಸೆಯುತ್ತ ಸಾಗಿದ. ಬಂದ ಉತ್ತರಗಳು ಸಮಾಧಾನ ನೀಡಲಿಲ್ಲ.

ADVERTISEMENT

ಆದರೆ ದಕ್ಷಿಣೇಶ್ವರದ ಶ್ರೀರಾಮಕೃಷ್ಣರು ನೀಡಿದ ಖಚಿತ ಉತ್ತರ ಅವನ ಬಾಳನ್ನು ಬದಲಿಸಿತು. ‘ದೇವರಿದ್ದಾನೆ. ನಾನು ಅವನನ್ನು ಕಂಡಿದ್ದೇನೆ. ಈಗ ಎದುರಿಗಿರುವ ನಿನ್ನನ್ನು ಕಾಣುತ್ತಿರುವಂತೆಯೇ ಸ್ಪಷ್ಟವಾಗಿ ಕಂಡಿದ್ದೇನೆ. ನಿನಗೂ ತೋರಿಸಬಲ್ಲೆ. ಆದರೆ ದೇವರಿಗಾಗಿ ವ್ಯಾಕುಲಪಡುವವರು ಯಾರು? ಕಾಮಿನಿ ಕಾಂಚನಕ್ಕಾಗಿ ಕೊಡಗಟ್ಟಲೆ ಕಣ್ಣೀರು ಸುರಿಸುತ್ತಾರೆ...’ ಮುಂದೆ ನಡೆದದ್ದು ಮಹಾಗುರುವಿನಿಂದ ಮಹಾಶಿಷ್ಯನ ನಿರ್ಮಾಣ.

ವಿವೇಕಾನಂದರ ಚಿಕಾಗೋ ವಿಶ್ವ ಧರ್ಮಸಮ್ಮೇಳನದ ಭಾಷಣ ಭಾರತದ ಪುನರ್ನವಕ್ಕೆ ಕಾರಣವಾಯಿತು. ಮುಂದೆ1902ರಲ್ಲಿ ಅವರು ಕಾಲವಾಗುವವರೆಗೂ ಈ ದೇಶದ ಜನರ ಉನ್ನತಿಗಾಗಿ ಶ್ರಮಿಸಿದರು. ಕೇವಲ 39 ವರ್ಷ ವಯಸ್ಸಿನಲ್ಲಿ ಅವರು ಸಾಧಿಸಿದ್ದನ್ನು ಜಗತ್ತು ಮತ್ತು ಭಾರತ ಗೌರಾವದರಗಳಿಂದ ನೆನೆಸುತ್ತದೆ. ಅವರ ಜನ್ಮದಿನವನ್ನು 'ಯುವದಿನಾಚರಣೆ' ಎಂದು ಸರ್ಕಾರ ಘೋಷಿಸಿದೆ.

ಯುವಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ–ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಅವರು ಸಾರಿದ್ದು ಶಕ್ತಿಯ ಸಂದೇಶವನ್ನು. ಅವರ ಬೋಧನೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ಸಂದೇಶ: 'ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ'. ಯುವಜನರಿಗೆ ಶಕ್ತಿಸಂಜೀವಿನಿಯನ್ನು ಬೋಧಿಸಿದರು: ‘ಫುಟ್ಬಾಲ್ ಆಡಿ ಬಲಿಷ್ಠವಾದ ಸ್ನಾಯುಗಳನ್ನು ಪಡೆದಿರೆಂದರೆ ನಿಮಗೆ ಭಗವದ್ಗೀತೆ ಸ್ಪಷ್ಟವಾಗಿ ಅರ್ಥವಾಗುವುದು’ ಎಂದರು. ‘ನಿಮ್ಮಂತಹ ಯುವಕರಿಗಾಗಿ ನಾನು ಸಾವಿರ ಸಲ ಬೇಕಾದರೂ ಹುಟ್ಟಿಬಂದೇನು. ಈ ಕಾಯವಳಿದರೇನು, ನಾನು ನಿಮ್ಮೆಲ್ಲರಲ್ಲಿ ಸೂಕ್ಷ್ಮರೂಪದಲ್ಲಿದ್ದು ಸಾಧಿಸಬೇಕಾದುದನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ’ ಎಂದೂ ಆಶ್ವಾಸನೆ ನೀಡಿದರು.

ಅಪಾರ ರಾಷ್ಟ್ರಪ್ರೇಮ, ವಿಶ್ವಭ್ರಾತೃತ್ವ, ಪ್ರಾಯೋಗಿಕ ವೇದಾಂತ ಅವರಲ್ಲಿ ಅಡಕವಾಗಿತ್ತು. ತನ್ನ ದೇಶ ಸ್ವತಂತ್ರವಾಗಬೇಕೆಂದು ಬಯಸಿದವರು ಮಹಾತ್ಮ ಗಾಂಧಿ, ಸುಭಾಶ್ಚಂದ್ರ ಬೋಸ್, ಅರವಿಂದ ಘೋಷ್ ಮೊದಲಾದ ಅನೇಕ ನಾಯಕರ ಮೇಲೆ ಪ್ರಭಾವ ಬೀರಿದವರು ವಿವೇಕಾನಂದರು. ಅವರ ದೇಶಪ್ರೇಮ ಅದರ ಸ್ವಾತಂತ್ರಗಳಿಕೆಯ ಕೇಂದ್ರಿತವಾಗಿತ್ತೆ ಹೊರತು ಅದು ಆಕ್ರಮಣಶೀಲ, ಪ್ರತಿಗಾಮಿ ಚಿಂತನೆಯಾಗಿರಲಿಲ್ಲ. ತನ್ನ ದೇಶ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಿಸಮಾನ ಗೌರವ ಹೊಂದಿ, ತನ್ನ ಆಂತರಿಕ ತತ್ತ್ವ ಆದರ್ಶ ಆಧ್ಯಾತ್ಮಿಕ ಶಕ್ತಿಯಿಂದ ಇತರ ದೇಶಗಳನ್ನು ಮುನ್ನಡೆಸಬೇಕು ಎಂದು ಅವರು ಬಯಸಿದ್ದರು.

ಭಾರತದ ನೆಲ ಆವರೆಗೆ ಕಂಡಿದ್ದ, ನಮ್ಮ ಮೇಲೆ ರಾಜಕೀಯ ಆರ್ಥಿಕ ದಬ್ಬಾಳಿಕೆ ನಡೆಸಿದ್ದ ಬಿಳಿಯರ ದಂಡಿಗಿಂತ ಭಿನ್ನವಾದ ಭಾರತದ ನೆಲವನ್ನು, ಸಂಸ್ಕೃತಿಯನ್ನು ಪ್ರೀತಿಸುವ ವಿದೇಶೀಶಿಷ್ಯರನ್ನು ಅವರು ಭಾರತಕ್ಕೆ ಪರಿಚಯಿಸಿದರು. ಹಿಂದೂಧರ್ಮಕ್ಕೆ ಸಂಘಟನೆಯ ಸ್ವರೂಪವಿದ್ದರೂ ಅದು ಸಾಮಾಜಿಕ ರಚನೆಗೆ ಪೂರಕವಾದ ಸಮಾಜಮುಖಿಯಾದ ಕ್ರಿಯಾತಂತ್ರವನ್ನು ಹೊಂದಿರಲಿಲ್ಲ. 'ಧರ್ಮವನ್ನು ಅಡುಗೆಮನೆಯಿಂದ ಹೊರಗೆಳೆದ' ಯಶಸ್ಸು ವಿವೇಕಾನಂದರಿಗೆ ಸಲ್ಲಬೇಕು.

ಪೂರ್ವದ ವಿಶಾಲ ಆಧ್ಯಾತ್ಮಿಕ ಚಿಂತನೆ ಮತ್ತು ಪಶ್ಚಿಮದ ಸಂಕಲ್ಪ ಶಕ್ತಿಯ ಸಂಕೇತವಾಗಿ ನಿಂತ ಮೇರುವ್ಯಕ್ತಿತ್ವದ ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯವಾಗಿ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.