ADVERTISEMENT

ವಚನಾಮೃತ | ಅಂತರಂಗ ಶುದ್ಧಿಯೇ ಶ್ರಾವಣ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 11:15 IST
Last Updated 17 ಜುಲೈ 2020, 11:15 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ನಮ್ಮ ಹಿಂದೂ ಧರ್ಮದ ಅನೇಕ ಗ್ರಂಥಗಳಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಹೇಳಲಾಗಿದೆ. ಶ್ರಾವಣದಲ್ಲಿ ಶಿವ ಭಕ್ತರು ಕಠಿಣವಾದ ವ್ರತ ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ.

ಏಕೆಂದರೆ ದೇವರು ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರ ಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು. ಮಂಥನದ ಸಮಯದಲ್ಲಿ ಸುಮಾರು 14 ವಿವಿಧ ರತ್ನಗಳು ಹೊರಹೊಮ್ಮುತ್ತವೆ. ಅದರಲ್ಲಿ ಹಾಲಾಹಲ ಎನ್ನುವ ಕಾರ್ಕೋಟಕ ವಿಷವೂ ಕೂಡ ಒಂದು. ಹಾಲಾಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ ಕಲ್ಲೋಲವಾಗಲಾರಂಭಿಸಿತು. ಆಗ ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನು ಸೇವಿಸುತ್ತಾನೆ.

ಇದನ್ನು ಗಮನಿಸಿದ ಪಾರ್ವತಿಯು ಓಡಿ ಬಂದು ತನ್ನ ಪತಿಯ ಗಂಟಲನ್ನು ಬಿಗಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಕಂಟದಲ್ಲೇ ಉಳಿದುಕೊಳ್ಳುತ್ತದೆ. ಅಂದಿನಿಂದ ಶಿವನನ್ನು ನೀಲಕಂಠ ಎಂದು ಕರೆಯುತ್ತಾರೆ.

ADVERTISEMENT

ಶ್ರಾವಣ ಮಾಸ ಎಂದರೆ ಶ್ರವಣ ಮಾಡುವ ಮಾಸ. ವರ್ಷದಲ್ಲಿ ಅನೇಕ ಮಾಸಗಳು ಬರುತ್ತವೆ. ಆದರೆ, ಶ್ರಾವಣ ಮಾಸಕ್ಕೆ ಭಕ್ತಿಯ ಮಾಸ, ಆಧ್ಯಾತ್ಮದ ಮಾಸ, ಶಿವ ಮಾಸ ಎಂತಲೂ ಕರೆಯುತ್ತಾರೆ.

ಮನುಷ್ಯ ಅನೇಕ ವಸ್ತುಗಳನ್ನು ಬಳಸಿಕೊಂಡು ದೇಹವನ್ನು ಶುಚಿಯಾಗಿಟ್ಟುಕೊಳ್ಳುತ್ತಾನೆ. ಆದರೆ, ಅಂತರಂಗಲ್ಲಿನ ಕಲ್ಮಷಗಳನ್ನು ಸ್ವಚ್ಛಗೊಳಿಸಲು ಶ್ರವಣದ ಮೂಲಕ ಪುರಾಣ ಪ್ರವಚನ, ಧ್ಯಾನ, ಪೂಜೆ, ಜಪ-ತಪ, ವ್ರತ ಹೀಗೆ ಅನೇಕ ಸಾಧನೆಗಳನ್ನು ಮಾಡಬೇಕು. ಆಗ ಮಾತ್ರ ಅಂತರಂಗವನ್ನು ಶುದ್ಧಿಗೊಳಿಸಲು ಸಾಧ್ಯವಿದೆ.

‘ಶ್ರವಣಂ ಹರತಿ ಪಾಪಾನಿ….’ ಒಳ್ಳೆಯ ನುಡಿಗಳನ್ನು ಕೇಳುವುದರಿಂದ ಪಾಪವು ನಾಶವಾಗುತ್ತದೆ. ಶ್ರಾವಣ ಮಾಸದಲ್ಲಿ ಶ್ರವಣ ಭಕ್ತಿ ಮಾಡುವ ಮೂಲಕ ನಮ್ಮ ಜನ್ಮಾಂತರದ ಕರ್ಮಫಲವನ್ನು ಕಳೆದುಕೊಂಡು ಪಾವನರಾಗೊಣ…

(ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ,ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.