ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ
ಕಹಿ ಸೋರೆಯ ಕಾಯ ತಂದು ವಿಭೂತಿಯ ತುಂಬಿದಡೆ
ಸಿಹಿಯಾಗದೆ ಮೂರು ದಿವಸಕ್ಕೆ?
ಅಯ್ಯಾ, ಹಲವು ಕಾಲ ಕೊಂದ ಸೂನೆಗಾರನ ಕೈಯ ಕತ್ತಿಯಾದಡೇನು
ಪರುಷ ಮುಟ್ಟಲಿಕೆ ಹೊನ್ನಾಗದೆ ಅಯ್ಯಾ?
ಲಲಾಟದಲ್ಲಿ ವಿಭೂತಿ ಬರೆಯಲಿಕೆ ಪಾಪ ಪಲ್ಲಟವಾಗದೆ
ಕೂಡಲಸಂಗಮದೇವಾ?
ನಾವು ಮಾಡಿದ ಪಾಪ– ಕರ್ಮಗಳು ಸದಾಕಾಲ ನಮ್ಮನ್ನು ಕಾಡುತ್ತಿರುತ್ತವೆ. ಅವುಗಳು ತಿಳಿದೋ, ತಿಳಿಯದೆಯೋ ನಮ್ಮಿಂದ ಆಗಿರುತ್ತವೆ. ಅವುಗಳಿಂದ ಮುಕ್ತಿ ದೊರೆಯುವುದೇ ಎಂಬ ಪ್ರಶ್ನೆಯೂ ಸದಾ ಕಾಲ ಕಾಡುತ್ತದೆ. ಪವಿತ್ರವಾದ ವಿಭೂತಿಯನ್ನು ಧರಿಸುವುದರಿಂದ ನಮ್ಮ ಪಾಪಕರ್ಮಗಳಿಂದ ಮುಕ್ತಿ ದೊರೆಯುತ್ತದೆ ಎನ್ನುವುದನ್ನು ಉದಾಹರಣೆಗಳ ಸಮೇತ ಬಸವಣ್ಣನವರು ಈ ಮೇಲಿನ ವಚನದಲ್ಲಿ ವಿವರಿಸಿದ್ದಾರೆ. ಕಹಿಸೋರೆ ಕಾಯಿಗೆ ವಿಭೂತಿಯನ್ನು ತುಂಬುವುದರಿಂದ ಅಥವಾ ಹಚ್ಚುವುದರಿಂದ ಮೂರು ದಿವಸಕ್ಕೆ ಅದು ಸಿಹಿಯಾಗುತ್ತದೆ. ಬಹಳಷ್ಟು ವರ್ಷಗಳ ಕಾಲ ಪ್ರಾಣ ವಧೆಯನ್ನು ಮಾಡಿದವನ ಆಯುಧವು ಪರುಷಮಣಿ ಮುಟ್ಟಿದ ತಕ್ಷಣ ಬಂಗಾರವಾಗಿ ಪರಿವರ್ತನೆ ಆಗುತ್ತದೆ. ಹಾಗೆಯೆ ನಾವು ಹಣೆಯ ಮೇಲೆ ಶುದ್ಧವಾದ ವಿಭೂತಿಯನ್ನು ಧರಿಸುವುದರಿಂದ ನಮ್ಮ ಹಣೆಬರಹ ಬದಲಾಗುತ್ತದೆ ಎನ್ನುವುದು ಇಲ್ಲಿನ ಆಶಯವಾಗಿದೆ.
-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.