ADVERTISEMENT

ವಾರ ಭವಿಷ್ಯ | 06-11-2022ರಿಂದ 12-11-2022ರವರೆಗೆ

ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 5 ನವೆಂಬರ್ 2022, 18:30 IST
Last Updated 5 ನವೆಂಬರ್ 2022, 18:30 IST
   

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ಆರ್ಥಿಕ ಸ್ಥಿತಿಯಲ್ಲಿ ಕೊಂಚ ಏರುಪೇರಾದರೂ ದೈವಾನುಗ್ರಹದಿಂದ ನಿಶ್ಚಿತ ಆದಾಯಕ್ಕೆ ತೊಂದರೆ ಇರುವುದಿಲ್ಲ. ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹಲವಾರು ದಾರಿಗಳನ್ನು ಹುಡುಕುವಿರಿ. ಮಹತ್ತರವಾದ ಯೋಜನೆಗಳನ್ನು ಆರಂಭಿಸಬೇಡಿರಿ. ಮಕ್ಕಳ ವಿಷಯದಲ್ಲಿ ಸ್ವಲ್ಪ ಬೇಸರ ಮೂಡಬಹುದು. ಸ್ತ್ರೀಯರಿಗೆ ಅಧಿಕ ದೈಹಿಕ ಶ್ರಮ ಆಗಬಹುದು. ಹಣದ ವಿಷಯದಲ್ಲಿ ದುಡುಕಿನ ಮಾತುಗಳು ಬೇಡವೇ ಬೇಡ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಕಠಿಣ ನಿಲುವುಗಳು ಬೇಡ. ಇದರಿಂದ ನಿಮ್ಮ ವ್ಯವಹಾರಕ್ಕೆ ತೊಂದರೆ ಆಗಬಹುದು. ಉದ್ಯೋಗದಲ್ಲಿನ ಸಂಕಷ್ಟಗಳನ್ನು ನಿಮ್ಮ ಜಾಣ್ಮೆಯಿಂದ ಪರಿಹರಿಸಿಕೊಳ್ಳಿ. ಕೃಷಿಕರಿಗೆ ಉಲ್ಲಾಸದಾಯಕವಾದ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚು ಯಶಸ್ಸು ಇರುತ್ತದೆ.

ವೃಷಭ ರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ADVERTISEMENT

ಅವಿವಾಹಿತರಿಗೆ ಕಂಕಣ ಬಲ ಒದಗುವ ಸಾಧ್ಯತೆ ಇದೆ. ಸಾಮಾಜಿಕ ಕೆಲಸಗಳನ್ನು ಮಾಡುವವರಿಗೆ ಜನಮನ್ನಣೆ ಒದಗಿಬರುತ್ತದೆ. ನಿಮ್ಮ ಸೌಮ್ಯ ನುಡಿಗಳು ಬಂಧುಗಳಲ್ಲಿ ಸಮಾಧಾನ ತರಬಹುದು. ಚಿನ್ನದ ಆಭರಣಗಳನ್ನು ಕಂತಿನ ರೂಪದಲ್ಲಿ ಕೊಳ್ಳುವ ಯೋಗವಿದೆ. ನೀವು ಅಂದುಕೊಂಡ ಕಾರ್ಯಗಳನ್ನು ಸಾಧಿಸಲು ಹಲವು ಮಾರ್ಗಗಳ ಹುಡುಕಾಟ ಮಾಡುವಿರಿ. ಆರ್ಥಿಕ ಸಂಕಷ್ಟ ಸ್ವಲ್ಪಮಟ್ಟಿಗೆ ಇರುತ್ತದೆ. ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ನಿಧಾನಗತಿಯ ಫಲಿತಾಂಶವನ್ನು ಕಾಣಬಹುದು. ತಾಯಿಯೊಡನೆ ಸಂಬಂಧ ಸುಧಾರಿಸುತ್ತದೆ. ತಾಯಿಯು ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಸರ್ಕಾರಿ ಮಟ್ಟದ ಸಾಲ ಸೌಲಭ್ಯಗಳು ಬರುವುದು ನಿಧಾನವಾಗುತ್ತದೆ. ಕೃಷಿ ಉತ್ಪನ್ನಗಳಿಂದ ಹೆಚ್ಚು ಲಾಭವಿರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಹಿರಿಯ ಉದ್ಯೋಗಸ್ಥರಿಗೆ ಹೊಸ ರೀತಿಯ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಹಣದ ಒಳಹರಿವು ಸಮಾಧಾನ ತರುತ್ತದೆ. ವೃತ್ತಿರಂಗದಲ್ಲಿ ಸೂಕ್ತ ಬೆಳವಣಿಗೆಯನ್ನು ಕಾಣಬಹುದು. ಕೆಲವು ರಾಜಕಾರಣಿಗಳಿಗೆ ಸ್ಥಾನಮಾನ ಅನಿರೀಕ್ಷಿತವಾಗಿ ದೊರೆಯುತ್ತದೆ. ಗುತ್ತಿಗೆ ವ್ಯವಹಾರವನ್ನು ಮಾಡುವ ಗುತ್ತಿಗೆದಾರರಿಗೆ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಉದ್ದಿಮೆದಾರರಿಗೆ ಇದ್ದ ಸಂಕಷ್ಟಗಳು ನಿವಾರಣೆಯಾಗಿ ಉದ್ದಿಮೆಯನ್ನು ಮುನ್ನಡೆಸುವ ಅವಕಾಶ ಒದಗುತ್ತದೆ. ಸಾಕಷ್ಟು ಆಲೋಚನೆ ಮಾಡಿ ಆಂತರಿಕ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಸಂಘಸಂಸ್ಥೆಗಳ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಮನೆಪಾಠ ಮಾಡುವವರ ಆದಾಯ ಹೆಚ್ಚುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಬೇಕಾದ ಅನಿವಾರ್ಯವಿದೆ. ಪ್ರಮುಖ ಯೋಜನೆಗಳ ಆಗುಹೋಗುಗಳ ಬಗ್ಗೆ ಪರಿಣಿತರ ಹತ್ತಿರ ವಿಚಾರ ಮಾಡುವಿರಿ. ಸಂಗೀತ ಮತ್ತು ಇತರೆ ಲಲಿತಕಲೆಗಳಲ್ಲಿ ಇರುವವರಿಗೆ ಮನ್ನಣೆ ದೊರೆತು ಸಂತಸವಾಗುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧ ಒದಗಿಬರುವ ಸಾಧ್ಯತೆ ಇದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗಬೇಡಿರಿ. ಕೆಲವರಿಗೆ ಕಚೇರಿ ಕೆಲಸದ ಮೇಲೆ ವಿದೇಶಕ್ಕೆ ಅಥವಾ ದೂರಪ್ರದೇಶಗಳಿಗೆ ನಿಯೋಜನೆಯಾಗಬಹುದು. ಹೊಸ ವ್ಯಕ್ತಿಗಳ ಪರಿಚಯದಿಂದ ಹೊಸ ವ್ಯವಹಾರಗಳನ್ನು ಆರಂಭಿಸುವ ಸಾಧ್ಯತೆಗಳಿವೆ. ಧನಾದಾಯ ತಕ್ಕಮಟ್ಟಿಗೆ ಇರುತ್ತದೆ. ಚಿನ್ನದ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಯಾವುದೇ ಕೆಲಸವನ್ನು ಆತುರದಿಂದ ಮಾಡಬೇಡಿರಿ. ಶುಭಕಾರ್ಯಗಳಿಗಾಗಿ ದೂರ ಪ್ರಯಾಣದ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಹಿರಿಯರ ಸಲಹೆಗಳಿಂದ, ಬರಲಿದ್ದ ಗಂಡಾಂತರಗಳಿಂದ ಪಾರಾಗುವಿರಿ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಗೃಹ ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಿರಿ. ಹಳೆ ವಾಹನವನ್ನು ನವೀಕರಣಗೊಳಿಸುವಿರಿ. ಶತ್ರುಗಳನ್ನು ಜಾಣ್ಮೆಯಿಂದ ಗೆಲ್ಲುವಿರಿ. ಗೃಹ ನಿರ್ಮಾಣ ಕಾರ್ಯಗಳನ್ನು ಈಗ ಕೈಗೆತ್ತಿಕೊಳ್ಳಬೇಡಿ. ಆಸ್ತಿ ಖರೀದಿಯಲ್ಲಿ ತಕರಾರು ಮೂಡಬಹುದು. ಹೈನುಗಾರಿಕೆ ಮಾಡುವವರಿಗೆ ಲಾಭವಿದೆ. ಧನಾದಾಯ ಚೇತರಿಕೆಯ ಹಾದಿಯಲ್ಲಿ ಇರುತ್ತದೆ. ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭವಿರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ನಿಮ್ಮದೇ ಭಿನ್ನಾಭಿಪ್ರಾಯದಿಂದಾಗಿ ನಿಂತುಹೋಗಿದ್ದ ಕೆಲಸ ಈಗ ಆರಂಭಗೊಳ್ಳುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಇರುತ್ತದೆ. ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣಬಹುದು. ಜಲ ಸಂಬಂಧಿ ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ. ನಿಮ್ಮ ಕೆಲಸಗಳಿಗೆ ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ ಆಗಬಹುದು. ನಿಮ್ಮ ಅಭಿವೃದ್ಧಿಗೆ ಪೂರಕವಾದ ಕೆಲವು ಅವಕಾಶಗಳು ಒದಗಿಬರುತ್ತವೆ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಗಳು ಸ್ವಲ್ಪ ನಿಧಾನವಾದರೂ ಮುಂದುವರಿಯುತ್ತವೆ. ನಿಮ್ಮ ನಡವಳಿಕೆಯಿಂದ ಜನರನ್ನು ಗೆಲ್ಲುವುದು ಉತ್ತಮ. ತಾಯಿಯಿಂದ ಅಥವಾ ತವರುಮನೆಯಿಂದ ಹೆಚ್ಚಿನ ಸಹಾಯ ದೊರೆಯುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಕಾನೂನಿನ ತೊಡಕುಗಳು ಬರಬಹುದು.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ನಿಮ್ಮ ಕೆಲವು ನಿಲುವುಗಳಲ್ಲಿ ಆಕಸ್ಮಿಕ ಬದಲಾವಣೆಗಳನ್ನು ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ. ವೈದ್ಯಕೀಯ ಔಷಧ ಸಂಶೋಧಕರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಒತ್ತಡಗಳು ಇರುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಕೆಲವು ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವನ್ನು ಕಾಣಬಹುದು. ಕೃಷಿಕರು ಬೆಳೆದ ಬೆಳೆಗೆ ಹೆಚ್ಚಿನ ಲಾಭ ದೊರೆಯುತ್ತದೆ. ಸಂಗಾತಿಯ ಸಲಹೆಗಳು ನಿಮಗೆ ಆತ್ಮಸ್ಥೈರ್ಯವನ್ನು ತುಂಬುತ್ತವೆ. ದೈಹಿಕ ಶ್ರಮದಿಂದ ದುಡಿಯುವ ಮಹಿಳೆಯರಿಗೆ ಶ್ರಮ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಿ, ಮನಸ್ಸಿಗೆ ನಿರಾಳವೆನಿಸುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ಕಚೇರಿ ಕೆಲಸದ ಮೇಲೆ ದೂರ ಪ್ರಯಾಣ ಆಗಬಹುದು.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಕೆಲಸಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಹೊಂದಾಣಿಕೆಯನ್ನು ಕಾಣುವ ಸಾಧ್ಯತೆಗಳಿವೆ. ಎದುರಾದ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ನಿರೀಕ್ಷಿತ ಚೇತರಿಕೆಯನ್ನು ಕಾಣಬಹುದು. ನಿಕಟವರ್ತಿಗಳಿಂದ ಸಹಾಯ ದೊರೆತು ಆತ್ಮಸ್ಥೈರ್ಯ ಹೆಚ್ಚುವುದು. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಹೊಸ ರೀತಿಯ ವ್ಯಾಪಾರಗಳಿಗೆ ಕರೆ ಬಂದಲ್ಲಿ ಅದರಲ್ಲಿನ ಆಗುಹೋಗುಗಳ ಬಗ್ಗೆ ಸರಿಯಾಗಿ ತಿಳಿದು ಮುನ್ನಡೆಯಿರಿ. ಕೀಲು ನೋವು ನಿಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಯಾವುದೇ ರೀತಿಯ ಏರಿಳಿತಗಳು ಇರುವುದಿಲ್ಲ. ಭೂ ವ್ಯವಹಾರ ಮಾಡುವವರು ಹೆಚ್ಚಿನ ಲಾಭ ಕಾಣಬಹುದು. ಮಹಿಳೆಯರ ಉಡುಪುಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗುವುದು.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಕುಟುಂಬದಲ್ಲಿ ಹೊಂದಾಣಿಕೆಯಿಂದ ಎಲ್ಲರ ಬೆಂಬಲಗಳಿಸುವಿರಿ. ವಿದ್ಯಾರ್ಥಿಗಳಿಗೆ ಮಂದಗತಿಯ ಪ್ರಗತಿ ಇರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನಪಲ್ಲಟವಾಗುವ ಸಾಧ್ಯತೆ ಇದೆ. ನಿಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಈಗ ಸಕಾಲ. ನಿರೀಕ್ಷಿತ ಮೂಲಗಳಿಂದ ಆದಾಯವಿರುತ್ತದೆ. ಆದರೆ ಆದಾಯದಷ್ಟೇ ಖರ್ಚು ಇರುತ್ತದೆ. ಶುಭಕಾರ್ಯಗಳನ್ನು ಮಾಡುವ ಉತ್ಸಾಹ ಬರುತ್ತದೆ. ಕಾರ್ಯಯೋಜನೆಗಳಲ್ಲಿ ಹಲವಾರು ಜನರು ಸಲಹೆಯನ್ನು ಕೊಟ್ಟರೂ ಸರಿಯಾಗಿ ತುಲನೆ ಮಾಡಿ ಅನುಷ್ಠಾನಗೊಳಿಸಿರಿ. ಕೆಲವು ರಾಜಕಾರಣಿಗಳ ಮಕ್ಕಳಿಗೆ ರಾಜಕೀಯ ಪ್ರವೇಶ ಮಾಡುವ ಅವಕಾಶ ಸಿಗುತ್ತದೆ. ವಾತ ಸಂಬಂಧಿ ದೋಷವಿರುವವರು ಹೆಚ್ಚು ಎಚ್ಚರ ವಹಿಸುವುದು ಅಗತ್ಯ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ವಿಶಾಲ ಮನೋಭಾವದಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಕ್ಲಿಷ್ಟವಾದ ಕೆಲಸಗಳನ್ನು ಆಶ್ಚರ್ಯಕರವಾದ ರೀತಿಯಲ್ಲಿ ಸಾಧಿಸಿ ಪ್ರಶಂಸೆಗೆ ಒಳಗಾಗುವಿರಿ. ರಾಜಕೀಯ ಕ್ಷೇತ್ರದಲ್ಲಿ ಸೂತ್ರಧಾರರಾಗಿ ಕೆಲಸ ಮಾಡುವವರಿಗೆ ಬೆಳವಣಿಗೆ ಇರುತ್ತದೆ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ಒಂದು ಹವ್ಯಾಸ ಸಂಪಾದನೆ ಮಾಡುವ ವೃತ್ತಿಯಾಗಿ ಬದಲಾಗಬಹುದು. ನೀವು ಕೊಡುವ ಸಲಹೆಗಳು ಸಂದರ್ಭೋಚಿತವಾಗಿ ಕೆಲವರಿಗೆ ಸಹಾಯವಾಗಿ ಒಳಿತಾಗುತ್ತದೆ. ಬಂಡವಾಳ ಹೂಡಿಕೆಯ ವಿಚಾರಗಳಲ್ಲಿ ಸಾಕಷ್ಟು ಎಚ್ಚರಿಕೆ ಅಗತ್ಯ. ಕೆಲವೊಂದು ವಿಚಾರಗಳಲ್ಲಿ ನಿಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಮುನ್ನುಗ್ಗಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಶೀತ ಬಾಧೆ ಸ್ವಲ್ಪ ಕಾಡಬಹುದು.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಚಿನ್ನದ ಸಗಟು ಆಭರಣ ತಯಾರಕರಿಗೆ ಲಾಭವಿರುತ್ತದೆ. ಧನಾದಾಯ ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಅನುಕೂಲವಿರುತ್ತದೆ. ಸರ್ಕಾರಿ ನೌಕರರಿಗೆ ವೃತ್ತಿಯಲ್ಲಿನ ಅಕಾಲಿಕ ಪ್ರಯಾಣದಿಂದ ಕಿರಿಕಿರಿಯಾಗುತ್ತದೆ ಮತ್ತು ಖರ್ಚೂ ಇರುತ್ತದೆ. ಮಹಿಳೆಯರು ನಡೆಸುವ ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಹಲವಾರು ಕೆಲಸಗಳನ್ನು ಒಟ್ಟಿಗೆ ಆರಂಭಿಸಿ ಗೊಂದಲ ಮಾಡಿಕೊಳ್ಳಬೇಡಿರಿ. ಯುವಕರಿಗೆ ವೃತ್ತಿಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಇರುವುದಿಲ್ಲ. ಶ್ವಾಸಕೋಶದ ತೊಂದರೆ ಇರುವವರು ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಮುನ್ನಡೆ ಸಾಧಿಸಬಹುದು. ಕೃಷಿಕರಿಗೆ ಆದಾಯ ಹೆಚ್ಚಾಗುವ ಲಕ್ಷಣಗಳಿವೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಮನಸ್ಸಿನಲ್ಲಿ ಇದ್ದ ತಪ್ಪು ಕಲ್ಪನೆಗಳು ದೂರವಾಗಿ ಸಂಬಂಧ ಗಟ್ಟಿಯಾಗುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವ್ಯವಸಾಯದಲ್ಲಿನ ಅಭಿವೃದ್ಧಿಯಿಂದ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವೃತ್ತಿಯಲ್ಲಿ ಅಧಿಕ ಒತ್ತಡಗಳನ್ನು ತಡೆದುಕೊಳ್ಳಬೇಕಾದ ಅನಿವಾರ್ಯವಿರುತ್ತದೆ. ಅನವಶ್ಯಕವಾಗಿ ಬೇರೆಯವರ ವ್ಯವಹಾರಗಳಲ್ಲಿ ಭಾಗಿಯಾಗುವುದುರಿಂದ ಕೆಲವು ಆಪಾದನೆಗಳನ್ನು ಎದುರಿಸಬೇಕಾದೀತು. ಆಮದು, ರಫ್ತು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆತು ಆದಾಯ ಹೆಚ್ಚುತ್ತದೆ. ಯೋಜನಾ ವಿಭಾಗದಲ್ಲಿ ಕೆಲಸ ಮಾಡುವವರ ಹೊಸ ಯೋಜನೆಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸ್ವಂತ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.