ದಾವಣಗೆರೆ: ಧ್ಯಾನ, ಜ್ಞಾನ ದಾಸೋಹದಷ್ಟೇ ಆರೋಗ್ಯ ದಾಸೋಹವೂ ಮುಖ್ಯ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದಲ್ಲಿ ಭಾನುವಾರ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 54ನೇ ಸ್ಮರಣೋತ್ಸವ ಪ್ರಯುಕ್ತ ಬಸವ ಕೇಂದ್ರ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಯದೇವ ಗುರುಗಳ ಸ್ಮರಣೆಯ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಹಬ್ಬದ ವಾತಾವರಣ ಇದೆ.ಈ ಉತ್ಸವದ ಅಂಗವಾಗಿ ಸಹಜ ಶಿವಯೋಗ, ಧ್ಯಾನದ ಹೆಸರಿನಲ್ಲಿ ಭಕ್ತಿ ದಾಸೋಹ ನಿರಂತರವಾಗಿ ನಡೆಯುತ್ತಿದೆ.ಇವು ಮುಂದುವರಿಯಲು ಭಕ್ತರ ಆರೋಗ್ಯ ಕಾಳಜಿಯೂ ಮುಖ್ಯವಾಗುತ್ತದೆ. ಮಕ್ಕಳಿಗೆ ಅನಾರೋಗ್ಯ ಕಾಡದಂತೆ ಪೌಷ್ಟಿಕಾಂಶವುಳ್ಳ ಹನಿ ಹಾಕಿಸಲಾಗಿದೆ.ರೋಗ ಬಾಧಿಸದಂತೆ ಮುಂಜಾಗ್ರತೆ ವಹಿಸುವುದೂ ಮುಖ್ಯ ಎಂದರು.ಅಂಧಶ್ರದ್ಧೆ ಅನುಸರಿಸುವವರು ರೋಗ ಬಾರದಂತೆ ದಾರ ಕಟ್ಟಿಸುವುದು, ಮಂತ್ರ, ತಂತ್ರ ಮಾಡುವುದರಿಂದ ಪ್ರಯೋಜನವಾಗದು.ವೈಜ್ಞಾನಿಕ ಚಿಕಿತ್ಸೆಯೇ ಮುಖ್ಯ ಎಂದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸ್ವಾಗತಿಸಿದರು. ಮಾಜಿ ಶಾಸಕ ಮೋತಿ ವೀರಣ್ಣ, ಡಾ.ಎಸ್.ಎಂ. ಎಲಿ, ಡಾ.ಜಿ.ಸಿ. ಬಸವರಾಜ್,ಡಾ.ಪಿ.ಎಂ ಉಪಾಸಿ, ಡಾ.ದಾಕ್ಷಾಯಣಿ ದೇವರು,ಡಾ.ಮೃತ್ಯುಂಜಯ,ಡಾ.ಎಂ.ಸಿ. ಅನೂಪ್ ಕುಮಾರ್, ಡಾ.ಎಂ. ಶಂಕರ, ಡಾ.ಮಹೇಶ್ವರಪ್ಪ, ಡಾ.ನಾಡಿಗ ರಾಜಶೇಖರ. ಡಾ.ಬಿ.ಕೆ. ವಿಶ್ವನಾಥ, ಡಾ.ದೇಸಾಯಿ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.