ADVERTISEMENT

ಅಡಿಕೆ ಮರಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 19:00 IST
Last Updated 17 ಏಪ್ರಿಲ್ 2011, 19:00 IST

ಕಳಸ: ಅಡಿಕೆ ಮರದ ರೋಗ ನಿರೋ -ಧಕ ಶಕ್ತಿ ಹೆಚ್ಚಿಸುವುದರ ಮೂಲಕ ಕೊಳೆ ರೋಗ ಸೇರಿದಂತೆ ಎಲ್ಲ ಬಗೆಯ ಕಾಯಿಲೆಯಿಂದ ಅಡಿಕೆ ಫಸಲನ್ನು ಪಾರು ಮಾಡಬಹುದು ಎಂದು ಬೆಂಗಳೂರಿನ ಅಗ್ರಿಕುಲಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ವಿಜ್ಞಾನಿ ಡಾ.ನಾಗರಾಜ ಹೆಗಡೆ ಅಭಿಪ್ರಾಯಪಟ್ಟರು.

ಪಟ್ಟಣದ ಕೆಸಿಎ ಬ್ಯಾಂಕ್ ಆಶ್ರಯದಲ್ಲಿ ಭಾನುವಾರ ಬ್ಯಾಂಕ್ ಆವರಣದಲ್ಲಿ ಅಡಿಕೆ ಕೊಳೆ ರೋಗದ ನಿಯಂತ್ರಣಕ್ಕಾಗಿ ನಡೆದ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು. ಅಡಿಕೆ ತೋಟಗಳಲ್ಲಿ ಪದೇ ಪದೇ ಬೋರ್ಡೋ ದ್ರಾವಣ ಸಿಂಪಡಣೆಯಿಂದಾಗಿ ತಾಮ್ರದ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಇದೆ. ಇದರ ಬದಲು ಬಯೋಫೈಟ್ ದ್ರಾವಣ ಬಳಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಕೊಳೆರೋಗ ತಡೆಯಬಹುದು ಎಂದರು.

ಅಡಿಕೆ ಬೆಳೆಗಾರ ನಾಗೇಶ್ ಅಗಳಿ ಮಾತನಾಡಿ, ಬ್ಯಾರಲ್ ಒಂದಕ್ಕೆ ಒಂದೂವರೆ ಲೀಟರ್ ಬಯೋಫೈಟ್ ಬಳಸಿ 120 ದಿನಗಳವರೆಗೂ ಕೊಳೆ ಬಾಧೆ ತಡೆದ ಅನುಭವ ವಿವರಿಸಿದರು. ಬಯೋಫೈಟ್ ಸಿಂಪಡಣೆ ಅನುಕೂಲಕರ ಮತ್ತು ಮಿತವ್ಯಯಿಯೂ ಹೌದು ಎಂದು ಅವರು ಅಂಕಿಅಂಶಗಳ ಸಹಿತ ವಿವರಿಸಿದರು.

ಸ್ಥಳೀಯರಾದ ಮಕ್ಕಿಮನೆ ದಿವಾಕರ್ ಭಟ್, ಕಳಕೋಡು ವರ್ಧಮಾನಯ್ಯ, ಕಲ್ಲಾರೆ ರವಿಪ್ರಕಾಶ್, ಶಾಮಣ್ಣ, ಕಾಶಿನಾಥ್ ಜೋಯಿಸ್, ಜಯಂತ್ ತೆಂಡೂಲ್ಕರ್ ಮತ್ತು ಗೊರಸುಕುಡಿಗೆ ರಮೇಶ್ ಬಯೋಫೈಟ್ ಬಳಕೆ ಬಗ್ಗೆ ಅನುಭವ ಹಂಚಿಕೊಂಡರು. ಮ್ಯಾಮ್‌ಕೋಸ್ ನಿರ್ದೇಶಕ ಸುಬ್ರಮಣ್ಯ ಮಾತನಾಡಿದರು.ಕೆಸಿಎ ಬ್ಯಾಂಕ್ ಅಧ್ಯಕ್ಷ ಮಂಜಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಕೆ.ವಿ.ನರೇಂದ್ರ, ಶ್ರೀನಿಧಿ ಅಗ್ರೋ ಕೆಮಿಕಲ್ಸ್‌ನ ಶ್ರೀಧರ್, ಸತೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.