ಬಾಳೆಹೊನ್ನೂರು: ಭಕ್ತರು ಭಕ್ತಿ-ಶ್ರದ್ಧೆಯಿಂದ ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಶಿವನ ಸಾಕಾರ ರೂಪ ಗುರು ಎಂದು ತಿಳಿದು ಬರಮಾಡಿಕೊಳ್ಳುತ್ತಾರೆಯೇ ಹೊರತು ಅನ್ಯತಾ ಭಾವನೆಯಿಂದಲ್ಲ. ಇದು ಒತ್ತಾಯಪೂರ್ವಕ ಹೇರಿಕೆಯೂ ಅಲ್ಲ ಎಂದು ಇಲ್ಲಿನ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಪ್ರತಿಕ್ರಿಯಿಸಿದ್ದಾರೆ.
ಪಂಚಪೀಠಗಳ ಸಂಪ್ರದಾಯ ಕುರಿತು ಹರಿಹರದ ಪಂಚಮಸಾಲಿ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಭಕ್ತರ ಭಾವನೆಗೆ ತಕ್ಕಂತೆ ಪೀಠಗಳು ಸ್ಪಂದಿಸುತ್ತಿವೆ. ವೀರಶೈವ ಧರ್ಮದ ಆದರ್ಶ ಸಂಪ್ರದಾಯ ಮತ್ತು ಮೌಲ್ಯಗಳನ್ನು ಅರಿಯದವರು ಪಂಚಪೀಠಗಳ ಬಗ್ಗೆ ಸಲ್ಲದ ಮಾತು ಆಡಿರುವುದು ಖಂಡನೀಯ.
ಇದು ಉದ್ದಟತನ ವರ್ತನೆಗೆ ಸಾಕ್ಷಿ. ರಾಜಕೀಯ ಉದ್ದೇಶಕ್ಕಾಗಿ ಹುಟ್ಟಿಕೊಂಡ ಕೆಲವು ಮಠಗಳು ಧರ್ಮದ ಸಮಗ್ರತೆ ಕೆಡಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಪಂಚಪೀಠಗಳಿಗೂ ಪಂಚಮಸಾಲಿ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಪೀಠಾಧೀಶರು, ವಿನಾಕಾರಣ ಪಂಚ ಪೀಠಗಳನ್ನು ಟೀಕಿಸಿರುವುದರ ಉದ್ದೇಶವೇನು? ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.