ಗುಲ್ಬರ್ಗ: ಜ್ಞಾನ ಸ್ಫೋಟದ ಈಗಿನ ಯುಗದಲ್ಲಿ ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸುವ ಅನುವಾದ ಸಾಹಿತ್ಯದಿಂದ ಅಭಿವೃದ್ಧಿ ಸಾಧ್ಯ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರಧಾನ ಗುರುದತ್ ತಿಳಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಣಿ ವಿಜ್ಞಾನ ವಿಭಾಗದ ಡಾರ್ವಿನ್ ಸಭಾಂಗಣದಲ್ಲಿ ಶನಿವಾರ `ಹಿಂದಿ ಅನುವಾದ: ಊಳಿಗಮಾನ್ಯ ಕಾಲದಿಂದ ಉತ್ತರ ಊಳಿಗಮಾನ್ಯ ಕಾಲದವರೆಗೆ~ ವಿಷಯ ಕುರಿತು ಜರುಗಿದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಅನುವಾದಕರಿಗೆ ವಿಶೇಷ ತರಬೇತಿ, ಪುಸ್ತಕ ಪ್ರಕಟಣೆಗೆ ಆರ್ಥಿಕ ನೆರವು ನೀಡುವ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ರಾಷ್ಟ್ರೀಯ ಭಾಷೆ ಹಿಂದಿಗೆ ಸರಿಸಮಾನವಾದ ಕನ್ನಡ ಭಾಷೆಗೂ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರು ಡಾ. ಪರಿಮಳ ಅಂಬೇಕರ ರಚಿಸಿದ `ಗಾಂಧಿ ದೃಷ್ಟಿಕೋನದಲ್ಲಿ ಹಿಂದೂ ಧರ್ಮ~ ಎನ್ನುವ ಹಿಂದಿ ಅನುವಾದಿತ ಕೃತಿಯನ್ನು ಬಿಡುಗಡೆಗೊಳಿಸಿದರು. ಸುರೇಶ ಹೇರೂರ ಕೃತಿ ಕುರಿತು ಮಾತನಾಡಿದರು.
ಖ್ಯಾತ ಅನುವಾದಕಿ ಪ್ರೊ. ಮಾಣಿಕಾಂಬಾ ಮುಖ್ಯ ಅತಿಥಿಗಳಾಗಿದ್ದರು. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕಿ ಡಾ. ಪರಿಮಳಾ ಅಂಬೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.