ಅರಸೀಕೆರೆ: ಎಂ.ಸಮೀವುಲ್ಲಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆಯ ಕೊನೆಯ ಸಾಮಾನ್ಯ ಸಭೆಯಲ್ಲಿ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರೊಬ್ಬರು ಬಳಸಿದ ಪದ ಸಭೆಯಲ್ಲಿ ಗೊಂದಲ ಸೃಷ್ಟಿಸಿತು. ಮಾತಿನ ಚಕಮಕಿ ತೀವ್ರವಾಗಿ ನಾಮ ನಿರ್ದೇಶಿತ ಐವರು ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದ ಪ್ರಸಂಗವೂ ನಡೆಯಿತು.
ಸಭೆಯ ಮುಕ್ತಾಯ ಹಂತದಲ್ಲಿ ನಾಮ ನಿರ್ದೇಶಿತ ಸದಸ್ಯ ಟಿ. ಅರುಣ್ಕುಮಾರ್ ಅವರು `ಪುರಸಭಾ ಸದಸ್ಯರು ಕ್ರಿಮಿನಲ್ಗಳಾದರೆ ಪಟ್ಟಣದ ಅಭಿವೃದ್ಧಿ ಹೇಗೆ ಸಾಧ್ಯ?~ ಎಂಬ ಹೇಳಿಕೆ ನೀಡಿದರು. ಇದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷದ ರೇವಣ್ಣ, ಜಿ.ಟಿ. ಗಣೇಶ್, ಖುಷಿಬಾಬು, ಗಂಗಮ್ಮ ಕೆ.ಎಸ್. ಸಿದ್ದಮ್ಮ, ಲೋಕೇಶ್, ಶಾಂತ್ರಾಜ್ ಸಿದ್ದರಾಮಶೆಟ್ಟಿ ರುಕ್ಮಿಣಿ ಮುಂತಾದ ಸದಸ್ಯರು ಹೇಳಿಕೆ ವಾಪಸ್ ಪಡೆಯಬೇಕು ಎಂದು ಕೂಗಾಡಿದರು.
ಅರುಣ್ಕುಮಾರ್ ಪ್ರತಿಕ್ರಿಯೆ ನೀಡಿ `ನಾನು ಉದ್ದೇಶಪೂರ್ವಕವಾಗಿ ಪದ ಬಳಸಿಲ್ಲ, ಆಕಸ್ಮಿಕವಾಗಿ ಬಂದಿದೆ, ಸಭೆಯ ಕ್ಷಮೆ ಕೋರುತ್ತೇನೆ~ ಎಂದರು. ಆದರೂ ಸದಸ್ಯರು ಶಾಂತರಾಗಲಿಲ್ಲ. ಕೆಲವು ಸದಸ್ಯರು ~ಬಿಜೆಪಿ ಸರ್ಕಾರದ ಮಂತ್ರಿಗಳು ಸಹ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿದ್ದಾರೆ~ ಎಂದು ತಿರುಗೇಟು ನೀಡಿದರು.
ಅಧ್ಯಕ್ಷ ಎಂ. ಸಮೀವುಲ್ಲಾ, `ಪಟ್ಟಣದ ಅಭಿವೃದ್ಧಿ ಬಗ್ಗೆ ಮಾತನಾಡಿ, ಟೀಕೆ ಬೇಡ~ ಎಂದು ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಸಚಿವರ ಬಗ್ಗೆ ಮಾಡಿದ ಟೀಕೆಯಿಂದ ಸಿಟ್ಟಿಗೆದ್ದ ಬಿಜೆಪಿ ನಾಮ ನಿರ್ದೇಶಿತ ಸದಸ್ಯರು `ಅಧ್ಯಕ್ಷರು ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು~ ಎಂದು ಪಟ್ಟುಹಿಡಿದರು.
ಅಧ್ಯಕ್ಷರು `ನೀವು ಕೂಗಾಡುವುದಾದರೆ ನಾವು ಸಭೆ ಮುಂದುವರಿಸುತ್ತೇವೆ~ ಎಂದರು. ಕೂಡಲೇ ಅರುಣ್ಕುಮಾರ್ ಶ್ರೀಧರ್, ಛೋಪ್ರಾ, ಶಿವನ್ರಾಜ್ ರೂಪಾ ಸಂಪತ್ಕುಮಾರ್ ಅವರು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗುತ್ತಾ ಸಭೆ ಬಹಿಷ್ಕರಿಸಿ ಸಭಾಂಗಣದ ಪ್ರವೇಶ ದ್ವಾರದಲ್ಲಿ ಧರಣಿ ಕುಳಿತರು. ಇತ್ತ ಸದಸ್ಯರು ಧಿಕ್ಕಾರ ಕೂಗುತ್ತಿದ್ದರೆ ಒಳಗೆ ಸಭೆ ಮುಕ್ತಾಯಗೊಳಿಸಲಾಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.