ADVERTISEMENT

ಎರಡನೇ ರಾಜಧಾನಿಗೆ ಆಗ್ರಹಿಸಿ ಸಹಿ ಸಂಗ್ರಹಣೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ದಾವಣಗೆರೆ: ರಾಜ್ಯದ ಎರಡನೇ ರಾಜಧಾನಿಯನ್ನಾಗಿ ದಾವಣಗೆರೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂದೆ ಭಾನುವಾರ ಎರಡನೇ ಹಂತದ ಸಹಿ ಸಂಗ್ರಹ ಕಾರ್ಯಕ್ರಮ ನಡೆಸಿದರು.

ದಾವಣಗೆರೆ ನಗರವು ಭೌಗೋಳಿಕವಾಗಿ ರಾಜ್ಯದ ಕೇಂದ್ರಭಾಗದಲ್ಲಿದೆ. ನಗರದ ಸಮೀಪ ರಾಷ್ಟ್ರೀಯ ಹೆದ್ದಾರಿ-4 ಹಾದು ಹೋಗಿದ್ದು, ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ. 2ನೇ ರಾಜಧಾನಿ ಆಗಲು ಎಲ್ಲ ಅರ್ಹತೆ ಹೊಂದಿದೆ ಎಂದರು.

ದಾವಣಗೆರೆಯು 1947-48ರಲ್ಲಿ ರಾಜಧಾನಿ ಆಗಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಗಾಂಜಿವೀರಪ್ಪ, ಕಾಸಲ್ ಶ್ರೀನಿವಾಸ ಶೆಟ್ಟಿ, ಎಚ್. ಸಿದ್ದವೀರಪ್ಪ ಮುಂತಾದವರು ಹೋರಾಟ ನಡೆಸಿದರೂ ಸಹ ಈಡೇರಲಿಲ್ಲ. ಈಗಾಗಲೇ, ಮಹಾರಾಷ್ಟ್ರದಲ್ಲಿ ನಾಗಪುರ ನಗರವು 2ನೇ ರಾಜಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ದಾವಣಗೆರೆಯನ್ನು 2ನೇ ರಾಜಧಾನಿಯಾಗಿ ಘೋಷಿಸಿ, ಆಡಳಿತ ವಿಕೇಂದ್ರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ಜನತೆ ತೆಲಂಗಾಣ, ಉತ್ತರಪ್ರದೇಶದಂತೆ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಕೇಳುತ್ತಿಲ್ಲ. ದಾವಣಗೆರೆ 2ನೇ ರಾಜಧಾನಿಯಾಗಿ ಮತ್ತು ಪ್ರತಿವರ್ಷ ಒಂದು ಅಧಿವೇಶನ ನಡೆದರೆ ದಾವಣಗೆರೆ ಸೇರಿದಂತೆ ಸುತ್ತಲಿನ ಜಿಲ್ಲೆಗಳು ಅಭಿವೃದ್ಧಿಯಾಗುತ್ತವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.