ADVERTISEMENT

ಎಲ್ಲೆಡೆ ವಿಜಯದಶಮಿಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಭಾಲ್ಕಿ: ಹೊಸ ಬಟ್ಟೆಗಳನ್ನು ಧರಿಸಿ ಗುಂಪು ಗುಂಪಾಗಿ ಸಾಗಿದ ಜನರ ಸೀಮೋಲ್ಲಂಘನೆ, ಹಲವೆಡೆ ಬನ್ನಿಯ ವಿಶೇಷ ಪೂಜೆ, ಮಠ, ಮಂದಿರಗಳಲ್ಲಿ ಭಕ್ತಾದಿಗಳ ವಿಶೇಷ ದರ್ಶನ, ಪರಸ್ಪರ ಬಂಗಾರ, ಬೆಳ್ಳಿಯ (ಬನ್ನಿ) ವಿನಿಮಯದೊಂದಿಗೆ ಗುರುವಾರ ಎಲ್ಲೆಡೆ ಸಂಭ್ರಮದ ವಿಜಯದಶಮಿ ನಡೆಯಿತು.

ಹಿರೇಮಠ ಸಂಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಾಯಂಕಾಲ ಪಲ್ಲಕ್ಕಿ, ನಂದಿಕೋಲು, ವಾದ್ಯ ಮೇಳಗಳ ಮೆರವಣಿಗೆ ನಡೆಯಿತು. ಯುವಕರ ವಚನಗಳ ಒಡಪುಗಳು ಗಮನ ಸೆಳೆದವು. ಚನ್ನಬಸವ ಆಶ್ರಮದಲ್ಲಿ ಸಮಾವೇಶಗೊಂಡು ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಬನ್ನಿ ಪೂಜೆ ನಡೆಸಲಾಯಿತು.

ಮತ್ತೊಂದೆಡೆ ಭಾಲ್ಕೇಶ್ವರ ದೇವಸ್ಥಾನದಿಂದ ರೂರಲ್ ಎಂಜಿನಿಯರಿಂಗ್ ಕಾಲೇಜಿನ ನಂದಿ ಕಟ್ಟೆಯವರೆಗೆ ಬನ್ನಿ ಮೆರವಣಿಗೆ ನಡೆಸಲಾಯಿತು. ಶಾಸಕ ಈಶ್ವರ ಖಂಡ್ರೆ, ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ನಗರಾಧ್ಯಕ್ಷ ಜಮೀಲ್ ಅಹಮ್ಮದ್, ಸುಶೀಲ ಸ್ವಾಮಿ, ಮಹಾದೇವ ಸ್ವಾಮಿ, ವಿಶ್ವನಾಥ ಮೋರೆ, ವಿಜಯಕುಮಾರ ರಾಜಭವನ ಮುಂತಾದವರು ಇದ್ದರು.

ಶಂಕರಲಿಂಗ ಮಠದಿಂದ ರಾಮೇಶ್ವರ ದೇವಸ್ಥಾನದ ವರೆಗೆ ನೂರಾರು ಜನರು ಬನ್ನಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.