ADVERTISEMENT

ಕತ್ತಲಲ್ಲಿ ಬೇಲೂರು ಚೆನ್ನಕೇಶವ ದೇವಾಲಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಬೇಲೂರು:ಇಲ್ಲಿನ ವಿಶ್ವ ವಿಖ್ಯಾತ ಚೆನ್ನಕೇಶವಸ್ವಾಮಿ ದೇವಾಲಯದಲ್ಲಿನ ಜನರೇಟರ್ ದುರಸ್ತಿ ಪಡಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಒಂದು ವಾರದಿಂದ ಇಡೀ ದೇವಾಲಯದ ಆವರಣ ರಾತ್ರಿ ವೇಳೆ ಕತ್ತಲಿನಲ್ಲಿ ಮುಳುಗಿದೆ. ಚೆನ್ನಕೇಶವನನ್ನು ಎಣ್ಣೆದೀಪದ ಬೆಳಕಿನಲ್ಲಿಯೇ ಪೂಜಿಸ ಬೇಕಾದ ದುಃಸ್ಥಿತಿ ಒದಗಿದೆ.

ಎರಡು ವರ್ಷಗಳ ಹಿಂದೆ ದೇವಾಲಯಕ್ಕೆ ಜನರೇಟರ್‌ನ್ನು ಖರೀದಿಸಲಾಗಿದೆ. ಇದು ಒಂದು ವಾರದ ಹಿಂದೆ ಕೆಟ್ಟು ನಿಂತಿದೆ. ಹಗಲು ರಾತ್ರಿ ಎನ್ನದೆ ಯಾವಾಗಲಾದರೂ ವಿದ್ಯುತ್ ಕಡಿತ ಆಗುತ್ತಿರುವುದರಿಂದ  ಚೆನ್ನಕೇಶವ ದೇವಾಲಯದ ಗರ್ಭಗುಡಿ, ಪ್ರಾಂಗಣಗಳಲ್ಲಿ ಕತ್ತಲು ಆವರಿಸುತ್ತಿದೆ.  ಪ್ರವಾಸಿಗರು ಹಗಲು, ರಾತ್ರಿಯಲ್ಲಿ ಕತ್ತಲಿನಲ್ಲಿಯೇ ದೇವಾಲಯವನ್ನು ವೀಕ್ಷಿಸಬೇಕಾದ ದುಃಸ್ಥಿತಿ ಒದಗಿದೆ.

ಸೋಮವಾರ ಸಂಜೆಯೂ ಇದು ಮುಂದುವರೆದಿದ್ದು, ಸಂಜೆಯ ಪೂಜಾ ವಿಧಿವಿಧಾನಗಳನ್ನು ಎಣ್ಣೆ ದೀಪದ ಬೆಳಕಿನಲ್ಲಿಯೇ ಮಾಡುವಂತಾಗಿದೆ.  ದೇವಾಲಯ ವೀಕ್ಷಣೆಗೆಂದು ಬರುವ ಪ್ರವಾಸಿಗರು ಕತ್ತಲು ಆವರಿಸಿದ ಮೇಲೆ ಟಾರ್ಚ್, ಮೊಬೈಲ್ ಬೆಳಕಿನಲ್ಲಿಯೇ ಶಿಲ್ಪಕಲೆಯನ್ನು ವೀಕ್ಷಿಸುತ್ತಿದ್ದಾರೆ.

ದೇವಾಲಯದ ಭದ್ರತೆಗೂ ಅಡ್ಡಿಯುಂಟಾಗಿದೆ.  ಯುಗಾದಿಯಿಂದ ಉತ್ಸವಗಳು ಆರಂಭವಾಗಲಿರುವುದರಿಂದ ತಕ್ಷಣ ಜನರೇಟರ್ ದುರಸ್ತಿ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.