ADVERTISEMENT

ಕಾಫಿ ಬೆಳೆ: ಉಪಕರಣ ಖರೀದಿಗೆ ನೆರವು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST
ಕಾಫಿ ಬೆಳೆ: ಉಪಕರಣ ಖರೀದಿಗೆ ನೆರವು
ಕಾಫಿ ಬೆಳೆ: ಉಪಕರಣ ಖರೀದಿಗೆ ನೆರವು   

ಬೇಲೂರು: ‘ಕಾರ್ಮಿಕರ ಕೊರತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಾಫಿ ತೋಟಗಳಲ್ಲಿ ಉಪಕರಣಗಳ ಬಳಕೆ ಹೆಚ್ಚು ಮಾಡಲು ಕಾಫಿ ಮಂಡಳಿ ರೂ 50 ಕೋಟಿ ಹಣ ಮೀಸಲಿಟ್ಟಿದೆ’ ಎಂದು ಕಾಫಿ ಮಂಡಳಿಯ ಸದಸ್ಯ ಪಿ.ಎಫ್.ಸಾಲ್ಡಾನಾ ಹೇಳಿದರು.

ಬೇಲೂರಿನ ಕಾಫಿ ಮಂಡಳಿ ವಿಸ್ತರಣಾ ಘಟಕದಿಂದ ತಾಲ್ಲೂಕಿನ ಗೆಂಡೇಹಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮೂಹ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪಕರಣ ಕೊಳ್ಳಲು ಕಾಫಿ ಬೆಳೆಗಾರರಿಗೆ ಶೇ 50ರಷ್ಟು ಸಹಾಯ ಧನ ನೀಡಲಾಗುವುದು. ಬೆಳೆಗಾರರಿಗೆ ಗರಿಷ್ಠ ರೂ 1.50 ಲಕ್ಷ ಸಬ್ಸಿಡಿ ದೊರೆಯಲಿದೆ. ಹಾಸನ ಜಿಲ್ಲೆಯಲ್ಲಿ ಬೆಳೆಗಾರರು ಮತ್ತು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ 12 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗಿದೆ’ ಎಂದು ತಿಳಿಸಿದರು.

ಹಾಸನ ಕಾಫಿ ಮಂಡಳಿಯ ಉಪ ನಿರ್ದೇಶಕ ಮೋಹನ್‌ದಾಸ್, ‘ಸಮೂಹ ಸಂಪರ್ಕಕ್ಕೆ ಗೆಂಡೇಹಳ್ಳಿಯನ್ನು ಆಯ್ದುಕೊಳ್ಳಲಾಗಿದೆ. ಇದರಿಂದ ಈ ಭಾಗದ 8-10 ಹಳ್ಳಿಗಳಿಗೆ ಅನುಕೂಲವಾಗುವುದು. 265 ಕಾಫಿ ತೋಟಗಳ ಮಣ್ಣನ್ನು ಪರೀಕ್ಷಿಸಿ ವರದಿ ನೀಡಲಾಗಿದೆ. ಈ ಭಾಗದಲ್ಲಿ ಅರೆಬಿಕಾ ಮತ್ತು 5 ಎಕರೆ ಒಳಗಿನ ಬೆಳೆಗಾರರೇ ಹೆಚ್ಚಾಗಿದ್ದಾರೆ.

ಕಾಯಿ ಕೊರಕ ರೋಗ ಹೆಚ್ಚಾಗಿದ್ದು ಎಲೆ ಚುಕ್ಕಿ ರೋಗ ಸಾಧಾರಣವಾಗಿದೆ. ಬೇರು ರೋಗ ಅಲ್ಲಲ್ಲಿ ಕಂಡುಬಂದಿದೆ ಎಂದರು.ಕಾಫಿ ಮಂಡಳಿ ವಿಜ್ಞಾನಿ ಡಾ.ಸೀತಾರಾಮು, ಡಾ.ಭಟ್, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಉದಯ್ ಕುಮಾರ್, ಬೆಳೆಗಾರರ ಒಕ್ಕೂಟದ ಡಾ.ಎನ್.ಕೆ.ಪ್ರದೀಪ್, ಕಾಫಿ ಮಂಡಳಿ ಜಂಟಿ ನಿರ್ದೇಶಕ ಪೊನ್ನಣ್ಣ, ಕಾಫಿ ಮಂಡಳಿ ಸದಸ್ಯ ದೇವರಾಜ್, ಗೆಂಡೇಹಳ್ಳಿ ಕಾಫಿ ಬೆಳೆಗಾರರ ಸಂಘ  ಅಧ್ಯಕ್ಷ ಶ್ರೀನಿವಾಸ್, ರುದ್ರೇಗೌಡ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.