ADVERTISEMENT

ಕುಂಭ ಮೆರವಣಿಗೆ: ಕುದುರೆ ಮೆರುಗು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಲಿಂಗಸುಗೂರ: ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೃತ್ತಿ ಕೌಶಲ್ಯಗಳಲ್ಲಿ ಕುಂಬಾರರ ಮಣ್ಣಿನ ಪಾತ್ರೆಗಳೂ ಒಂದು. ಅಂತೆಯೆ ರಾಯಚೂರು ಜಿಲ್ಲಾ ಮಟ್ಟದ ಕುಂಬಾರರ ಮಹಾ ಸಮ್ಮೇಳನ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಮಹಿಳೆಯರು ಮಣ್ಣಿನ ಮಡಿಕೆಗಳ ಕುಂಭ ಮೇಳ ನಡೆಸಿದ್ದು ವಿಶೇಷವಾಗಿತ್ತು.

ಈ ಕುಂಭ ಮೆರವಣಿಗೆಗೆ ಇಳಕಲ್ಲಿನ ಹನುಮಂತಪ್ಪ ಕುಂಬಾರ ಅವರ ಕುದುರೆ ಭಾರಿ ಮೆರಗು ನೀಡಿತ್ತು.

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಬಣ್ಣಗಳಿಂದ ಅಲಂಕರಿಸಲಾಗಿದ್ದ ಮಣ್ಣಿನ ಮಡಿಕೆಗಳಿಗೆ ವೀಳ್ಯದ ಎಲೆ, ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಕುಂಭಗಳನ್ನು ಹೊತ್ತು ಮೆರವಣಿಗೆ ಸಾಲಿನಲ್ಲಿ ಪಾಲ್ಗೊಂಡಿದ್ದರು. ಕುಂಭ ಮೆರವಣಿಗೆ ಮುಂದೆ ಆಮದಿಹಾಳದ ಗದ್ದೆಪ್ಪ ಭಜಂತ್ರಿ ಅವರ ಕಣಿವಾದಕ್ಕೆ ಶ್ವೇತ ವರ್ಣದ ಕುದುರೆ ಹೆಜ್ಜೆ ಹಾಕುತ್ತಿದ್ದುದು ಪಟ್ಟಣದ ನಾಗರಿಕರನ್ನು  ಆಕರ್ಷಿಸಿತು.

ಈಶ್ವರ ದೇವಸ್ಥಾನದಿಂದ ವಿಜಯ ಬ್ಯಾಂಕ್, ಪುರಸಭೆ, ಅಂಚೆ ಕಚೇರಿ, ಬಸ್ ನಿಲ್ದಾಣ ವೃತ್ತ, ಲಕ್ಷ್ಮಿ ದೇವಸ್ಥಾನದ ಮಾರ್ಗವಾಗಿ ಬಾಜಾ ಭಜಂತ್ರಿ ಸಮೇತ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ನೇತೃತ್ವವನ್ನು ಸಂಗಪ್ಪ ಬಯ್ಯಾಪೂರ, ಶರಣಪ್ಪ ಕರಡಕಲ್ಲ, ವಿರೇಶ ಚಕ್ರಸಾಲಿ, ಮಲ್ಲಪ್ಪ ಗೆಜ್ಜಲಗಟ್ಟಾ, ಪಂಪಾಪತಿ ಚಿಲ್ಕರಾಗಿ, ಕವಿತಾ, ಸರಸ್ವತಿ, ಸುವರ್ಣ, ಮಂಜುಳಾ ಮತ್ತಿತರರು ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.