ಮಂಗಳೂರು: ಕೇಂದ್ರವು ಜಾರಿಗೆ ತರಲು ಉದ್ದೇಶಿಸಿರುವ ಕೋಮು ಹಿಂಸೆ ತಡೆ ಮಸೂದೆಯಿಂದ (ಪ್ರಿವೆನ್ಷನ್ ಆಫ್ ಕಮ್ಯೂನಲ್ ಆ್ಯಂಡ್ ಟಾರ್ಗೆಟೆಡ್ ವಾಯ್ಲೆನ್ಸ್) ಸಮಾಜದಲ್ಲಿ ಶಾಂತಿ ನೆಲೆಸುವ ಬದಲಿಗೆ ವೈಮನಸ್ಸು ಹೆಚ್ಚಲು ಕಾರಣವಾಗಲಿದೆ. ಹೀಗಾಗಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಪ್ರಯತ್ನ ಕೈಬಿಡಬೇಕು ಎಂದು ಅಖಿಲ ಭಾರತೀಯ ವಕೀಲರ ಪರಿಷತ್ ಮಂಗಳೂರು ಘಟಕ ಆಗ್ರಹಿಸಿದೆ.
ಘಟಕದ ಪದಾಧಿಕಾರಿಗಳು ಹಾಗೂ ವಕೀಲರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು. ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿಯೇ ಈ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ನಿರ್ಧರಿಸಿದೆ. ಇದರಿಂದ ಬಹುಸಂಖ್ಯಾತರು ಭಯದ ನೆರಳಲ್ಲಿ ಬದುಕುವಂತಾಗಿದೆ.
ಇಂತಹ ಮಸೂದೆಗಳಿಂದ ದೇಶದಲ್ಲಿ ಜನರು ಸಾಮರಸ್ಯದಿಂದ ಬಾಳುವುದು ಕಷ್ಟವಾಗಲಿದೆ ಎಂದು ಪ್ರತಿಭಟನಾಕಾರರು ದೂರಿದರು.ದೆಹಲಿಯಲ್ಲಿ ಬುಧವಾರ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದಕ್ಕೆ ವಕೀಲರು ಆಘಾತ ವ್ಯಕ್ತಪಡಿಸಿದರು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.