ಮೂಡಿಗೆರೆ: ಕೌಟುಂಬಿಕ ದೌರ್ಜನ್ಯಗಳ ದೂರು ದಾಖಲಾಗಿ ಸಮಾಲೋಚನೆಯ ಮೂಲಕ ಇತ್ಯರ್ಥಗೊಂಡ ಪ್ರಕರಣಗಳ ಕುಟುಂಬಗಳ ಸಮೀಕ್ಷೆ ನಡೆಸಿ ಯಾವುದೇ ಸಮಸ್ಯೆಗಳಿಲ್ಲವೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಎ. ಶೇಷಗಿರಿ ತಿಳಿಸಿದರು.
ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯತಿ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ ಈ ವರ್ಷ 20 ಕೌಟುಂಬಿಕ ದೂರು ದಾಖಲಾಗಿದ್ದು, ಆರು ಇತ್ಯರ್ಥ ಪಡಿಸಲಾಗಿದ್ದು, ಎಂಟು ದೂರುಗಳನ್ನು ನ್ಯಾಯಾಲಯಕ್ಕೆ ವಹಿಸಲಾಗಿದೆ. ಇನ್ನುಳಿದ ಆರು ದೂರುಗಳ ಸಮಾಲೋಚನೆ ನಡೆಯುತ್ತಿದೆ ಎಂದು ಶಿಶು ಅಭಿವೃದ್ಧಿ ಇಲಾಖೆ ವರದಿಗೆ ಪ್ರತಿಕ್ರಿಯಿಸಿದರು.
ಅಂಗನವಾಡಿಗಳಿಗೆ ಮಕ್ಕಳನ್ನು ಕರೆತರುವಲ್ಲಿ ಕಾರ್ಯಕರ್ತರು ವಿಫಲರಾಗುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅಂಗನವಾಡಿ ಮಕ್ಕಳೇ ಹೆಚ್ಚಾಗಿ ದಾಖಲಾಗುವುದರಿಂದ ಪ್ರಾಥಮಿಕ ಹಂತಕ್ಕೆ ಸೂಕ್ತ ರೀತಿಯಲ್ಲಿ ಮಕ್ಕಳನ್ನು ತಯಾರು ಮಾಡಬೇಕಾದ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರಿಗಿದೆ ಎಂದರು.
ಸರ್ಕಾರದ ಸೌಲಭ್ಯ ವಿತರಣೆ ಸಮಾರಂಭಗಳನ್ನು ತಾಲ್ಲೂಕು ಮಟ್ಟಕ್ಕೆ ಸೀಮಿತಗೊಳಿಸದೇ ಹೋಬಳಿ ಮಟ್ಟ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಿದರೆ ಅನುಕೂಲವಾಗಲಿದೆ ಎಂದರು.ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ.
ಮುಂದಿನ ಸಭೆಯೊಳಗೆ ಕುಡಿಯುವ ನೀರಿನ ಎಲ್ಲಾ ಯೋಜನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿ ಅನಂತರಾಮು ಅವರಿಗೆ ತಿಳಿಸಿದರು. ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷೆ ಸುಮಾ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ನೇಪಾ ಆದಿತ್ಯ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕುಮಾರಯ್ಯ ಮತ್ತು ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.