ಶಿರಸಿ: ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವ ಸರ್ಕಾರಿ ಶಾಲೆ ಶಿಕ್ಷಕರ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭಾನುವಾರ ಇಲ್ಲಿ ಹೇಳಿದರು.
ನಗರದ ನಿಲೇಕಣಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಸರ್ಕಾರಿ ಶಾಲೆಗಳಿಗೆ ಎಲ್ಲ ಸೌಲಭ್ಯ ನೀಡಲಾಗಿದ್ದು, ಸಾಕಷ್ಟು ಬದಲಾವಣೆಗಳಾಗಿವೆ. ಆದರೂ ಖಾಸಗಿ ಶಾಲೆಗಳ ಬಗ್ಗೆ ಜನಸಾಮಾನ್ಯರಿಗೆ ಆಸಕ್ತಿ ಇದೆ.ಖಾಸಗಿ ಶಾಲೆಗಳ ಗುಣಾತ್ಮಕ ಅಂಶಗಳನ್ನು ಪರಿಶೀಲಿಸಿ ಸರ್ಕಾರಿ ಶಾಲೆ ಶಿಕ್ಷಕರು ಅದನ್ನು ಅಳವಡಿಸಿಕೊಳ್ಳಬೇಕು.
ಸರ್ಕಾರಿ ನೌಕರರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಆದರ್ಶ ತೋರಬೇಕು. ಇಲ್ಲಿ ಕಲಿತರೆ ಸಾಧನೆ ಕಷ್ಟ ಎಂಬ ತಪ್ಪು ಭಾವನೆ ಇದೆ. ಆದರೆ ಸರ್ಕಾರಿ ಶಾಲೆಯಲ್ಲಿ ಕಲಿತು ಉನ್ನತ ಮಟ್ಟಕ್ಕೆ ಏರಿದವರ ಪಟ್ಟಿ ದೊಡ್ಡದಿದೆ’ ಎಂದು ಅವರು ಹೇಳಿದರು.
ಸರ್ವ ಶಿಕ್ಷಾ ಅಭಿಯಾನ ಶತಕ ಕಂಡ ಶಾಲೆಗಳ ಇತಿಹಾಸ ದಾಖಲಾತಿಗೆ ಸೂಚಿಸಿದೆ. ಶಾಲೆಯ ಇತಿಹಾಸ ದಾಖಲಿಸಿದರೆ ಭವಿಷ್ಯದ ಮಕ್ಕಳಿಗೆ ಶಾಲೆಯ ಹಿನ್ನೆಲೆ ತಿಳಿಯುವ ಮೂಲಕ ಕಲಿಯುವ ಶಾಲೆಯ ಬಗ್ಗೆ ಅಭಿಮಾನ ಮೂಡುತ್ತದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಪ್ರೇಮಾನಂದ ಜೈವಂತ ಕಾರ್ಯಕ್ರಮ ಉದ್ಘಾಟಿಸಿ,ಸರ್ವ ಶಿಕ್ಷಾ ಅಭಿಯಾನದಲ್ಲಿ ಸಾಕಷ್ಟು ಅನುದಾನ ದೊರಕುತ್ತಿದ್ದು, ಸದ್ಬಳಕೆ ಆಗಬೇಕು ಎಂದರು. ನಗರಸಭೆ ಅಧ್ಯಕ್ಷ ರವಿ ಚಂದಾವರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಗೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.