ADVERTISEMENT

ಗಣಿ-ಭೂವಿಜ್ಞಾನ ಇಲಾಖೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಚಿತ್ರದುರ್ಗ: ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ ಚಿತ್ರದುರ್ಗ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. 
ನಗರದ ಮುಖ್ಯರಸ್ತೆಗಳಲ್ಲಿ ಪ್ರತಿಭಟನಕಾರರು ಬಿಜೆಪಿ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಮನವಿ ಸಲ್ಲಿಸಿದರು.

ಹೊಸದುರ್ಗ ತಾಲ್ಲೂಕು ಮತ್ತೋಡು ಹೋಬಳಿ ಸಿದ್ದಗೊಂಡನಹಳ್ಳಿಯ ಸರ್ವೇ ನಂಬರ್ 52ರಲ್ಲಿ ಕ್ರೋಡೀಕರಿಸಿದ್ದ 5 ಸಾವಿರ ಮೆಟ್ರಿಕ್ ಟನ್ ಅದಿರಿನ ಪುಡಿಯನ್ನು 2009 ಡಿಸೆಂಬರ್ 22ರಂದು ಹರಾಜು ಮಾಡಲಾಗಿದ್ದು, ಅದನ್ನು ಸಾಗಣೆ ಮಾಡಲು 2010 ಮಾರ್ಚ್ 5ರಿಂದ 29ರವರೆಗೆ ಕಾಲವಕಾಶ ನಿಡಲಾಗಿತ್ತು. ಆದರೆ, 5 ಸಾವಿರ ಮೆಟ್ರಿಕ್ ಟನ್ ಬದಲಾಗಿ 50 ಸಾವಿರ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಇಷ್ಟಾದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ 9,744 ಮೆಟ್ರಿಕ್ ಟನ್ ಅಕ್ರಮವಾಗಿ ಅದಿರು ಸಾಗಣೆ ಮಾಡಲಾಗಿದೆ ಎಂದು ದಂಡ ವಿಧಿಸಿ, ತನಿಖೆ ನಡೆಸದೇ ಪ್ರಕರಣ ಕೈಬಿಟ್ಟಿದ್ದಾರೆ.

ಆಕ್ರಮ ಅದಿರು ಸಾಗಣಿಕೆದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಯುವ ಕಾಂಗ್ರೆಸ್ ಸಮಿತಿಯ ಖಾಲೀದ್‌ಹುಸೇನ್, ಸೈಯದ್ ಮೊಹಿನುದ್ದೀನ್, ಎಂ.ಸಿ. ವಿನೂತನ್, ನಜ್ಮತಾಜ್, ಎಸ್. ಮೋಹನ್, ಡಿ. ರಾಕೇಶ್  ಪಾಲ್ಗೊಂಡಿದ್ದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.