ADVERTISEMENT

ಟಿಪ್ಪರ್ ಹರಿಸಿ ಹೆಡ್ ಕಾನ್‌ಸ್ಟೇಬಲ್ ಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ತೀರ್ಥಹಳ್ಳಿ: ಆಗುಂಬೆ ಘಾಟಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಿಲ್ಲ ಎಂದು ಸಿಟ್ಟಿಗೆದ್ದ ಚಾಲಕ ಕರ್ತವ್ಯದಲ್ಲಿದ್ದ ಮುಖ್ಯ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಟಿಪ್ಪರ್‌ಲಾರಿ ಹರಿಸಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಆಗುಂಬೆ ಚೆಕ್ ಪೋಸ್ಟ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಆಗುಂಬೆ ಪೊಲೀಸ್ ಠಾಣೆಯ ಶಂಕರಪ್ಪ (53) ಮೃತ ದುರ್ದೈವಿ. ಶಿವಮೊಗ್ಗದ ರವೀಂದ್ರ ಆರೋಪಿ ಚಾಲಕ.
ಆಗುಂಬೆ ಘಾಟಿಯಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಚಾಲಕ ಬೆಳಿಗ್ಗೆ ಒತ್ತಾಯಿಸಿದ್ದಾನೆ. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ. ನಂತರ ರವೀಂದ್ರ ವಾಹನವನ್ನು ಕೆರೆಕಟ್ಟೆ ಮಾರ್ಗದ ಮೂಲಕ ಮಣಿಪಾಲಕ್ಕೆ ಸಾಗಿಸಿದ್ದಾನೆ. ವಾಪಸ್ ಆಗುಂಬೆ ಮಾರ್ಗದ ಮೂಲಕ ಖಾಲಿ ಲಾರಿ ರಾತ್ರಿ 11ರ ಸುಮಾರಿಗೆ ಆಗಮಿಸಿದೆ.

ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಶಂಕರಪ್ಪ ಲಾರಿ ತಡೆಯುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಚಾಲಕ ಅವರ ಮೇಲೆ ಲಾರಿ ಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರ ಲಾರಿಯೊಂದಿಗೆ ಪರಾರಿಯಾದ ಚಾಲಕನನ್ನು ತೀರ್ಥಹಳ್ಳಿಯಲ್ಲಿ ಬಂಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.