ADVERTISEMENT

ದಾವಣಗೆರೆ: ಸಂಭ್ರಮದ ಈದ್- ಮಿಲಾದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:30 IST
Last Updated 16 ಫೆಬ್ರುವರಿ 2011, 18:30 IST

ದಾವಣಗೆರೆ: ಪ್ರವಾದಿ ಮಹಮದ್ ಪೈಗಂಬರ್ ಅವರ 1,485ನೇ ಜನ್ಮದಿನದ ಸಲುವಾಗಿ ಈದ್-ಮಿಲಾದನ್ನು ನಗರದ ಮುಸ್ಲಿಂ ಬಾಂಧವರು ಬುಧವಾರ ಸಂಭ್ರಮದಿಂದ ಆಚರಿಸಿದರು.ಬೆಳಿಗ್ಗೆಯಿಂದಲೇ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು ಜರುಗಿದವು. ಬಡಜನರಿಗೆ ಹಣ್ಣುಹಂಪಲು, ಮಾಂಸ, ಹಾಲು, ಧಾನ್ಯ ನೀಡಲಾಯಿತು. ವಿನೋಬ ನಗರದ ಖಬರಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲಲ್ಲಿ ಶಾಮಿಯಾನ ಹಾಕಿ ಕಿತ್ತಳೆ, ಬಾಳೆಹಣ್ಣು ಪಾನಕ ವಿತರಿಸಲಾಯಿತು.

ನಗರದ ವಿವಿಧ ಭಾಗಗಳಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಈದ್ ಶುಭಾಶಯ ಕೋರಿದರು. ಕೆಟಿಜೆ ನಗರ, ಭಗತ್‌ಸಿಂಗ್ ನಗರ, ಆಜಾದ್ ನಗರ ಸೇರಿದಂತೆ ಮುಸ್ಲಿಂ ಬಾಂಧವರು ಹೆಚ್ಚು ಇರುವ ಬಡಾವಣೆಗಳ ಬೀದಿಗಳು ಹಸಿರು ಬಾವುಟ, ತೋರಣಗಳಿಂದ ಶೃಂಗರಿಸಲ್ಪಟ್ಟಿದ್ದವು. ಹೊಸ ಬಟ್ಟೆಗಳನ್ನು ಧರಿಸಿ ಯುವಕರು ಬೈಕ್ ಹಾಗೂ ಆಟೋಗಳಲ್ಲಿ ಬಾವುಟ ಹಿಡಿದು ಸಡಗರದಿಂದ ಓಡಾಡುತ್ತಿದ್ದರು.

ವಿಶ್ವಕ್ಕೆ ಶಾಂತಿ, ಕರುಣೆಯ ಸಂದೇಶ ಸಾರಿದ ಪ್ರವಾದಿ ಮಹಮದರ ಜನ್ಮದಿನ ತಮಗೆ ಅತ್ಯಂತ ಪವಿತ್ರವಾದದ್ದು. ಪರಸ್ಪರ ಸೌಹಾರ್ದದಿಂದ ಸಹಬಾಳ್ವೆ ನಡೆಸಬೇಕು. ಹಿಂದೂ ಬಾಂಧವರೂ ನಮ್ಮೊಂದಿಗೆ ಸಂತೋಷದಿಂದ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಆಜಾದ್ ನಗರದ ಹಿರಿಯರೊಬ್ಬರು ತಿಳಿಸಿದರು.ಮಸೀದಿಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಕೆಲವು ಮನೆಗಳಲ್ಲೂ ವಿಶೇಷ ಅಲಂಕಾರ, ಔತಣಕೂಟ ವ್ಯವಸ್ಥೆ ಮಾಡಲಾಗಿತ್ತು.ಈದ್ ಹಿನ್ನೆಲೆಯಲ್ಲಿ ಮದ್ಯಮಾರಾಟ ಸಂಪೂರ್ಣ ನಿಷೇಧಿಸಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮಧ್ಯಾಹ್ನ ನಡೆದ ಮೆರವಣಿಗೆಯಲ್ಲಿ ಕೆಲವು ಹಿಂದೂ ಸಮಾಜ ಬಾಂಧವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.