ಚನ್ನಗಿರಿ: ದೇಗುಲಗಳು ಶಾಂತಿ, ನೆಮ್ಮದಿಯ ತಾಣಗಳು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಮುಖ್ಯ ಕಚೇರಿಯ ಮುಂಭಾಗದಲ್ಲಿ ಸತ್ಯಸಾಯಿ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲಾಗುತ್ತಿರುವ ಸತ್ಯಸಾಯಿ ಸೇವಾ ಕ್ಷೇತ್ರ ಹಾಗೂ ಸಾಯಿ ಗಣಪತಿ ಮಂದಿರದ ಶಂಕುಸ್ಥಾಪನಾ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜನರಲ್ಲಿ ಧಾರ್ಮಿಕ ಭಾವನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂಬುದಕ್ಕೆ ಕಳೆದ ಮೂರು ವರ್ಷಗಳಲ್ಲಿ ಅನೇಕ ದೇಗುಲಗಳನ್ನು ನಿರ್ಮಾಣ ಮಾಡಿರುವುದೇ ಸಾಕ್ಷಿ. ದೇಗುಲಗಳನ್ನು ನಿರ್ಮಿಸುವುದು ಸುಲಭ. ಆದರೆ, ನಿರ್ಮಾಣಗೊಂಡ ನಂತರ ಅವುಗಳನ್ನು ನಿರ್ವಹಣೆ ಕಷ್ಟದ ಕಾರ್ಯವಾಗಿದೆ ಎಂದರು.
ಮೂಢನಂಬಿಕೆಗೆ ದಾಸರಾಗಬಾರದು. ಜೀವನದಲ್ಲಿ ಸಂಸ್ಕಾರವಂತರಾಗಬೇಕು. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ವಚನದ ಸಾರದಂತೆ ಕಾಯಕಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಪಾಂಡುರಂಗ ಶೇಟ್ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಎಂ.ಬಿ. ರಾಜಪ್ಪ, ಸದಸ್ಯರಾದ ಭಾರತಿ ಪ್ರಸಾದ್, ಸಿ.ಕೆ. ರೇವಣ್ಣ, ಲಕ್ಷ್ಮೀ ರುದ್ರೋಜಿರಾವ್, ಪಿ.ಬಿ. ನಾಯಕ್, ಮುಖ್ಯ ಅಂಚೆ ಕಚೇರಿ ಅಧಿಕಾರಿ ಲಿಂಗರಾಜ್, ರೈತ ಸಂಘದ ಅಧ್ಯಕ್ಷ ಸುಣಿಗೆರೆ ಪರಮೇಶ್ವರಪ್ಪ, ಎಲ್.ಎಂ. ಬಾಬಣ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.