ಸಾಲಿಗ್ರಾಮ (ಮೈಸೂರು ಜಿಲ್ಲೆ): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ಲೂಟಿಕೋರರು. ಇವರಿಂದ ರಾಜ್ಯ ರಾಜಕಾರಣ ಸಂಪೂರ್ಣ ಹಾಳಾಗುತ್ತಿದೆ. ಇಂತಹ ವ್ಯಕ್ತಿಗಳ ಪ್ರವೇಶದಿಂದ ಧರ್ಮದೇವತೆಯ ಸ್ಥಳಕ್ಕೆ ಅಪವಾದ ಬರುತ್ತದೆ ಎಂದು ಸಂಸದ ಎಚ್.ವಿಶ್ವನಾಥ್ ಅವರು ಸೋಮವಾರ ಕಿಡಿಕಾರಿದರು.
ಇಲ್ಲಿಗೆ ಸಮೀಪ ಜಪದಕಟ್ಟೆಯ ಜಪ್ಯೇಶ್ವರ ದೇವಾಲಯದ ರಾಜಗೋಪುರದ ಉದ್ಟಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಲೂಟಿ ಮಾಡಿರುವ ಇಬ್ಬರೂ ಆಣೆ ಮಾಡಲು ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಗೆ ಬರುವುದಾಗಿ ಪ್ರಚಾರ ಮಾಡಿದ್ದಾರೆ. ಇಂತಹ ವ್ಯಕ್ತಿಗಳು ಧರ್ಮದೇವತೆ ಇರುವ ಸ್ಥಳಕ್ಕೆ ಬಂದರೆ ಆ ಸ್ಥಳಕ್ಕೆ ಅಪವಾದ ಬರುವ ಜತೆಗೆ ಪಾವಿತ್ರ್ಯತೆ ಹಾಳಾಗುತ್ತದೆ. ಆದ್ದರಿಂದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಇವರಿಬ್ಬರು ಗಡಿ ದಾಟದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಧರ್ಮಸ್ಥಳದಲ್ಲಿ ಮುಖ್ಯಮಂತ್ರಿ ಪ್ರಮಾಣ ಮಾಡಲು ಬರುತ್ತಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಅವರು ಅಲ್ಲೇ ವಾಸ್ತವ್ಯ ಮಾಡಿದ್ದಾರೆ. ಬಿಜೆಪಿ ಮುಖಂಡರು ಶಾಸಕರಿಗೆ ಮಾಡಿದಂತೆ ಮಂಜುನಾಥನಿಗೂ ಆಪರೇಷನ್ ಕಮಲ ಮಾಡಿಯಾರು ಎಂಬ ಭಯ ನನಗೆ ಶುರುವಾಗಿದೆ ಎಂದು ಅವರು ಗೇಲಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.