ಶಿರಾ: ~ಸಮಾಜದಿಂದ ನಾನೇನು ಪಡೆಯಬಲ್ಲೆ ಎಂಬ ಚಿಂತನೆ ಅನರ್ಥಕ್ಕೆ ಕಾರಣವಾಗುತ್ತದೆ. ಸಮಾಜಕ್ಕೆ ನಾನೇನು ಕೊಡಬಲ್ಲೆ ಎಂಬ ಚಿಂತನೆ ಯಶಸ್ಸಿಗೆ ಕಾರಣವಾಗುತ್ತದೆ~ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದಲ್ಲಿರುವ ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
~ಎಲ್ಲಾರಿಕಿ ನಮಸ್ಕಾರಂ~ ಎಂಬ ಎರಡು ತಮಿಳ್ಗನ್ನಡದ ಪದಗಳೊಂದಿಗೆ ಮಾತು ಪ್ರಾರಂಭಿಸಿದರು. `ಔಪಚಾರಿಕ ಶಿಕ್ಷಣದ ಕೊರತೆಯನ್ನು ಅನೌಪಚಾರಿಕ ಶಿಕ್ಷಣದ ಮೂಲಕ ತುಂಬಿಕೊಡುವ ಸಮತಾ ವಿದ್ಯಾಲಯದ ಯತ್ನ ಶ್ಲಾಘನೀಯ~ ಎಂದರು.
~ಸಾಮರ್ಥ್ಯವೃದ್ಧಿಗೆ ವಿಶಿಷ್ಟ ಶಿಕ್ಷಣ ಕ್ರಮ~ ಕುರಿತು ಒಂದು ಗಂಟೆ ಕಾಲ ನಿರರ್ಗಳ ಉಪನ್ಯಾಸ ನೀಡಿದರು. ಸಾಧಿಸುವ ಛಲದ ಸ್ಫೂರ್ತಿಯಿಂದ ಬೆಳಗಿದ ಯುವ ಮನಸ್ಸು ಈ ವಿಶ್ವದ ಅತ್ಯಂತ ಅಮೂಲ್ಯ ಸಂಪನ್ಮೂಲ ಎಂದು ವ್ಯಾಖ್ಯಾನಿಸಿದರು.
ಸಾಹಿತಿ ದೇವನೂರು ಮಹಾದೇವ, ರೈತ ಸಂಘದ ಮುಖಂಡ ಕಡಿದಾಳು ಶಾಮಣ್ಣ, ಪ್ರೊ.ರವಿವರ್ಮಕುಮಾರ್, ರೈತ ಸಂಘದ ಅನಸೂಯಮ್ಮ, ಶಾಸಕ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.