ಬಳ್ಳಾರಿ: `ಪರಿಸರ ಪ್ರವಾಸೋದ್ಯಮ ಕುರಿತು ಕಠಿಣ ಕಾನೂನು ಜಾರಿಗೊಳಿಸುವ ಮೂಲಕ ವನ್ಯಜೀವಿಗಳ ರಕ್ಷಣೆಗಾಗಿ ಕಾಳಜಿ ವ್ಯಕ್ತಪಡಿಸುವ ಅಗತ್ಯವಿದೆ` ಎಂದು ಬಿಳಿಗಿರಿ ರಂಗನ ಬೆಟ್ಟದ ಹುಲಿ ಅಭಯಾರಣ್ಯ ನಿರ್ದೇಶಕ ವಿಜಯ್ ಮೋಹನ್ರಾಜ್ ಅಭಿಪ್ರಾಯಪಟ್ಟರು.
ಲಯನ್ಸ್ ಕ್ಲಬ್ ಹಾಗೂ ನೇಚರ್ ಕ್ಲಬ್ಗಳು ವನ್ಯಜೀವಿ ಸಪ್ತಾಹದ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ~ಪರಿಸರ ಪ್ರವಾಸೋದ್ಯಮ ವರವೋ- ಶಾಪವೋ~ ವಿಷಯ ಕುರಿತ ಚರ್ಚಾಕೂಟದಲ್ಲಿ ಅವರು ಮಾತನಾಡಿದರು.
`ಪ್ರವಾಸ ಎಂಬುದು ಹೊಟ್ಟೆ ತುಂಬಿದವರ ಹವ್ಯಾಸವಾಗಿದೆ. ಅದರಲ್ಲೂ ಧಾರ್ಮಿಕ ಸ್ಥಳಗಳ, ಇತಿಹಾಸ ಪ್ರಸಿದ್ಧ, ಪಾರಂಪರಿಕ ಸ್ಥಳಗಳ ಹಾಗೂ ರೆಸಾರ್ಟ್ಗಳ ಪ್ರವಾಸಕ್ಕೆ ಆದ್ಯತೆ ನೀಡುವ ಜನ, ಪರಿಸರ ಪ್ರವಾಸೋದ್ಯಮಕ್ಕೆ ಕೊನೆಯ ಸ್ಥಾನ ನೀಡಿದ್ದಾರೆ. ಮೋಜಿಗಾಗಿ, ಸ್ನೇಹಿತರೊಂದಿಗೆ ನೈಸರ್ಗಿಕ ಸ್ಥಳಗಳ ಪ್ರವಾಸ ಹೊರಡುವವರ ಸಂಖ್ಯೆಯೇ ಅಧಿಕ` ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಮತ್ತು ಪರಿಸರ ಪ್ರೇಮಿ ದಿನೇಶ್ ಸಿಂಗಿ ಮಾತನಾಡಿದರು.
ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ, ಕರಡಿ ಧಾಮ ಮತ್ತಿತರ ಪ್ರದೇಶಗಳಲ್ಲಿನ ವನ್ಯಜೀವಿಗಳ ದೈನಂದಿನ ಜೀವನಕ್ಕೆ ಅಡಚಣೆ ಆಗದಂತೆ ನೋಡಿಕೊಳ್ಳುವ ಮೂಲಕ, ಶಬ್ದ, ವಾಯು ಮಾಲಿನ್ಯ ಹೆಚ್ಚದಂತೆ ಗಮನಿಸಬೇಕು ಎಂದು ಪರಿಸರ ತಜ್ಞ ಸಮದ್ ಕೊಟ್ಟೂರ್ ಹೇಳಿದರು.
ವನ್ಯಜೀವಿ ಪ್ರೇಮಿ ಸಂತೋಷ್ ಮಾರ್ಟಿನ್, ಗಣೇಶ ಶಂಕರ್, ಲಯನ್ಸ್ ಕ್ಲಬ್ ಪರಿಸರ ವಿಭಾಗದ ಅಧ್ಯಕ್ಷ ಡಾ.ಅರವಿಂದ್ ಪಟೇಲ್, ಅಧ್ಯಕ್ಷ ಕೈಲಾಶ್ ಜೈನ್, ನೇಚರ್ ಕ್ಲಬ್ ಸಂಚಾಲಕ ಡಾ.ಎಸ್.ಕೆ. ಅರುಣ್, ಎಂ.ರಾಜಶೇಖರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.