ADVERTISEMENT

ಪಾರ್ಶ್ವವಾಯು: ಮುನ್ನೆಚ್ಚರಿಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಹಾಸನ: `ದುರ್ವ್ಯಸನಗಳಿಂದ ದೂರವಿದ್ದು, ಆರೋಗ್ಯದತ್ತ ಗಮನ ಹರಿಸಿದರೆ ಪಾರ್ಶ್ವವಾಯುವಿನಂಥ ರೋಗವನ್ನು ತಡೆಗಟ್ಟಬಹುದು. ಇದರ ಜತೆಗೆ ಪಾರ್ಶ್ವವಾಯುವಿನ ಲಕ್ಷಣ ಗೋಚರಿಸುತ್ತಿದ್ದಂತೆಯೇ ಚಿಕಿತ್ಸೆ ಆರಂಭಿಸಿದರೆ ಎಷ್ಟೋ ಪ್ರಾಣಗಳನ್ನು ಉಳಿಸಬಹುದು~ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಹಾಸನ ಘಟಕದ ಅಧ್ಯಕ್ಷ ಡಾ. ಗುರುರಾಜ ಹೆಬ್ಬಾರ್ ನುಡಿದರು.

ವಿಶ್ವ ಪಾರ್ಶ್ವವಾಯು  ದಿನಾಚರಣೆ  ಅಂಗವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಶಿಯನ್ಸ್ ಮತ್ತು ಎಸ್.ಎಸ್.ಎಂ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಾಸನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

`ಜಗತ್ತಿನಲ್ಲಿ ಲಿಂಗ, ವಯಸ್ಸಿನ ಭೇದವಿಲ್ಲದೆ ಪ್ರತಿ 6 ಸೆಕೆಂಡಿಗೆ ಒಬ್ಬ ವ್ಯಕ್ತಿ ಪಾರ್ಶ್ವವಾಯುವಿನಿಂದ ಸಾವಿಗೀಡಾಗುತ್ತಿದ್ದಾನೆ. 

 ಯಾವುದೇ ಸಂದರ್ಭದಲ್ಲಿ ಯಾವ ವ್ಯಕ್ತಿಯೂ ಈ ರೋಗಕ್ಕೆ ಬಲಿಯಾಗಬಹುದು. ಈ ಹಿನ್ನೆಲೆಯಲ್ಲಿ 2010ನೇ ಸಾಲಿನಿಂದ ಅಕ್ಟೋಬರ್ 29ನ್ನು ಪಾರ್ಶ್ವವಾಯು ದಿನವನ್ನಾಗಿ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.

ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡುವುದು, ಕ್ರಿಯಾಶೀಲವಾಗಿದ್ದು ಪ್ರತಿದಿನ ವ್ಯಾಯಾಮ ಮಾಡುವುದು, ಮದ್ಯಪಾನ, ಧೂಮಪಾನದಂಥ ದುಶ್ಚಟಗಳಿಂದ ದೂರ ಉಳಿಯುವುದು, ಇವೆಲ್ಲ ಪಾರ್ಶ್ವವಾಯು ತಡೆಯುವ ಮಾರ್ಗಗಳು ಎಂದು ತಿಳಿಸಿದರು.

ಐಎಪಿ ಅಧ್ಯಕ್ಷ ಡಾ. ದೊಡ್ಡೇಗೌಡ, ಅಧ್ಯಕ್ಷ ಡಾ. ಕೆ. ನಾಗೇಶ್, ಡಾ. ಕೆ.ಶಂಕರ್, ಡಾ. ಹಾಲ್ ಪ್ರಶಾಂತ್ ಡಿ.ಎಸ್. ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.