ADVERTISEMENT

ಪುರಸಭೆಯಿಂದಲೇ ರಸ್ತೆ ಒತ್ತುವರಿ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:00 IST
Last Updated 1 ಏಪ್ರಿಲ್ 2011, 19:00 IST
ಪುರಸಭೆಯಿಂದಲೇ ರಸ್ತೆ ಒತ್ತುವರಿ!
ಪುರಸಭೆಯಿಂದಲೇ ರಸ್ತೆ ಒತ್ತುವರಿ!   

ಚಿತ್ತಾಪುರ: ಸಾರ್ವಜನಿಕ ರಸ್ತೆಯ ಪಕ್ಕದ ಖುಲ್ಲಾ ಜಾಗವನ್ನು ಪಟ್ಟಣದ ಸಾರ್ವಜನಿಕರು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ತಾಲ್ಲೂಕು ಆಡಳಿತ ಅದನ್ನು ತೆರವು ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಪುರಸಭೆ ಆಡಳಿತವೇ ಸಾರ್ವಜನಿಕ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆ, ಚರಂಡಿ ನಿರ್ಮಾಣ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಐಡಿಎಸ್‌ಎಂಟಿ ಯೋಜನೆಯಡಿ 2005-06ನೇ ಸಾಲಿನಲ್ಲಿ ಪುರಸಭೆ ವತಿಯಿಂದ ಇಲ್ಲಿನ ಚಿತಾವಲಿ ಚೌಕ್‌ನಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದೆ. ಮಳಿಗೆ ಉದ್ಘಾಟನೆಯಾಗಿ ವರ್ಷಗಳೇ ಉರುಳಿವೆ. ಆದರೆ, ಅವುಗಳನ್ನು ಬಾಡಿಗೆಗೆ ನೀಡಿಲ್ಲ. ಸಾರ್ವಜನಿಕ ಜಾಗ ಅತಿಕ್ರಮಿತ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ವಾಣಿಜ್ಯ ಮಳಿಗೆಗಳು ಧರೆಗುರುಳಲಿದ್ದು, ಲಕ್ಷಾಂತರ ರೂಪಾಯಿ ಮಣ್ಣುಪಾಲಾಗಲಿದೆ ಎಂದು ಪುರಸಭೆ ಮೂಲಗಳು ಹೇಳುತ್ತವೆ.

ಮಳಿಗೆ ನಿರ್ಮಾಣ ಮಾಡುವಾಗ ಸಾರ್ವಜನಿಕ ರಸ್ತೆಯ ಜಾಗದಲ್ಲಿ ಮಳಿಗೆ ನಿರ್ಮಾಣ ಮಾಡಿದರೆ ಪರಿಣಾಮ ಏನಾಗುತ್ತದೆ ಎಂದೂ ಅಂದಾಜಿಸದೇ ನಿರ್ಮಾಣ ಮಾಡಿರುವುದರಿಂದ ಸಾರ್ವಜನಿಕ ಹಣ ವ್ಯರ್ಥ ಪೋಲಾಗುವಂತಾಗಿದೆ ಎಂದು ಪುರಸಭೆ ಸದಸ್ಯರೊಬ್ಬರು ಹೇಳಿದರು.ಅದೇ ರೀತಿಯಾಗಿ ಇಲ್ಲಿನ ನೂತನ ಬಸವೇಶ್ವರ ಪುತ್ಥಳಿ ಹತ್ತಿರದಿಂದ ಬಸ್ ನಿಲ್ದಾಣದ ಮಾರ್ಗವಾಗಿ ಸಾರ್ವಜನಿಕ ಚರಂಡಿ ರಸ್ತೆಗೆ ಹೊಂದಿಕೊಂಡು ನಿರ್ಮಾಣ ಮಾಡಲಾಗಿದೆ. ಅತಿಕ್ರಮಿತ ಕಟ್ಟಡ ತೆರವು ನಡೆಯುವಾಗ ಈ ಚರಂಡಿಯು ಇಲ್ಲವಾಗುತ್ತದೆ. 2 ವರ್ಷದ ಹಿಂದೆ  ಮಾಡಿದ ಲಕ್ಷಾಂತರ ರೂಪಾಯಿ ವೆಚ್ಚಪ್ರಯೋಜನಕ್ಕೆ ಬಾರದಂತಾಗಿದೆ. ವ್ಯರ್ಥ ಪೋಲಾಗುತ್ತಿದೆ. ಇಲ್ಲೇ ಇರುವ  ಮಳಿಗೆಗಳಿಗೂ ಧಕ್ಕೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.