ಗದಗ: ಕೆಎಸ್ಆರ್ಟಿಸಿ ಬಸ್ ಮತ್ತು ಗೂಡ್ಸ್ ಟೆಂಪೊ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಟೆಂಪೊದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಶುಕ್ರವಾರ ಮಲ್ಲಸಮುದ್ರ ಸಮೀಪ ಶುಕ್ರವಾರ ನಡೆದಿದೆ.
ಧಾರವಾಡ ಜಿಲ್ಲೆಯ ಕುಂದುಗೊಳ ತಾಲ್ಲೂಕಿನ ಪಶುಪತಿಹಾಳದ ಮಹೇಶ ಕಟಗಿ (48), ಬಾಪೂಜಿ ಕಟಗಿ (50) ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುರೇಶ್ ನಿಂಬಣ್ಣ, ಬಸವರಾಜ ಸೋಮಣ್ಣ ಛಬ್ಬಿ, ಗಂಗಪ್ಪ ಗಿರಿಯಪ್ಪ ಕಟಗಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೀರಭದ್ರೇಶ್ವರ ಮೂರ್ತಿ ತರಲು ಪಶುಪತಿಹಾಳದಿಂದ ಲಕ್ಕುಂಡಿಗೆ ಏಳು ಮಂದಿ ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದರು. ಮಲ್ಲಸಮುದ್ರ ಸಮೀಪದ ಸೇತುವೆ ಬಳಿಯ ತಿರುವಿನಲ್ಲಿ ಲಕ್ಷೇಶ್ವರ ಕಡೆಗೆ ಹೊರಟಿದ್ದ ಬಸ್ ಎದುರಿನಿಂದ ಬಂದ ಟೆಂಪೊಗೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಎಸ್ಪಿ ರವಿನಾಯಕ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಪ್ರಕರಣ ಗ್ರಾಮೀಣ ಠಾಣೆಯಲ್ಲಿದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.