ಮಂಡ್ಯ: ನಿಗದಿತ ಅವಧಿಗೆ ವೇತನ ಪಾವತಿಸಬೇಕು ಮತ್ತು ಮೂರು ತಿಂಗಳಿಂದ ಬಾಕಿ ಉಳಿಸಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಟಾಸ್ಕ್ಪೋರ್ಸ್ ನೌಕರರು ಸೋಮವಾರ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಾವೇರಿ ನೀರಾವರಿ ನಿಗಮದ ನಗರ ಕಚೇರಿಯ ಎದುರು ಗುಂಪುಗೂಡಿದ ನೂರಾರು ನೌಕರರು, ವೇತನ ನೀಡುವಲ್ಲಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆಗಳಿಗೆ ನೀರು ಹರಿಸುವುದು ಮತ್ತು ನೀರು ಕಟ್ಟುವ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿ ಕಾವೇರಿ ನೀರಾವರಿ ನಿಗಮದ ಅಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನವನ್ನೇ ಪಾವತಿಸಿಲ್ಲ ಎಂದು ದೂರಿದರು.
ಸಂಘದ ಮುಖಂಡರಾದ ಶ್ರೀಕಾಂತ, ಗಿರೀಗೌಡ ಅವರು ಮಾತನಾಡಿ, ನೀರುಗಂಟಿಗಳು, ಟಾಸ್ಕ್ಫೋರ್ಸ್ ನೌಕರರ ಕುಟುಂಬಗಳಿಗೆ ವೇತನವಿಲ್ಲದ ಸಮಸ್ಯೆಯಾಗಿದೆ. ಅಧಿಕಾರಿಗಳು ಇನ್ನಾದರೂ ವಿಳಂಬವನ್ನು ಗಮನಿಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಿಗಮದ ಅಧಿಕಾರಿಯೊಬ್ಬರು ಏಪ್ರಿಲ್ನ ಮೊದಲ ಪಾಕ್ಷಿಕದಲ್ಲಿ ವೇತನ ವಿಳಂಬ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಕೆಂಪೇಗೌಡ, ಬೋರೇಗೌಡ, ವೈರಮುಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.