ADVERTISEMENT

ಬಿಜೆಪಿ ಕೈಬಿಡದ ಶಿಕ್ಷಕ ಪದವೀಧರ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 19 ಮೇ 2012, 19:30 IST
Last Updated 19 ಮೇ 2012, 19:30 IST

ಗಂಗಾವತಿ: `ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಇತಿಹಾಸದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತದಾರರು ಎಂದೂ ವಂಚನೆ ಮಾಡಿಲ್ಲ~ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಪಾಟೀಲ್ ಹೇಳಿದರು.

ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಒಂದೊಮ್ಮೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ಹುಡುಕುವ ಸ್ಥಿತಿ ಬಿಜೆಪಿಗಿತ್ತು. ಅಂತಹ ಸಂದರ್ಭದಲ್ಲಿಯೂ ಶಿಕ್ಷಕ ಮತ್ತು ಪದವೀಧರರ ಕ್ಷೇತ್ರದ ಮತದಾರರು ಬಿಜೆಪಿಯನ್ನು ನಿರಂತರವಾಗಿ ಬೆಂಬಲಿಸುತ್ತಲೆ ಬಂದಿದ್ದಾರೆ ಎಂದರು. 

ಡಾ.ಎಂ.ಆರ್. ತಂಗಾ, ಬಸವರಾಜ ಪಾಟೀಲ್ ಸೇಡಂ, ಶಶೀಲ್ ಜಿ. ನಮೋಶಿ, ಮನೋಹ ಮಸ್ಕಿ ಅವರು ಗೆಲುವು ಸಾಧಿಸಿದಂತೆ ಈಶಾನ್ಯ ಪಧವೀಧರ ಕ್ಷೇತ್ರದಿಂದ ತಾವು ಆಯ್ಕೆಯಾಗುವುದು ಖಚಿತ. ಅದಕ್ಕೆ ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.

15 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದೇನೆ. ಹಲವಾರು ಸ್ಥಾನಗಳನ್ನು ವಹಿಸಿಕೊಂಡು ಸೇವೆ ಮಾಡಿದ್ದೇನೆ. ಅದನ್ನು ಗುರುತಿಸಿ ಸರ್ಕಾರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿತ್ತು ಎಂದು ಪಾಟೀಲ್ ಸ್ಮರಿಸಿದರು.

ಈಶಾನ್ಯ ಪದವೀಧರರ ಕ್ಷೇತ್ರ ವ್ಯಾಪ್ತಿಯು ಬೀದರ್‌ನಿಂದ ಹರಪನಹಳ್ಳಿವರೆಗೂ ಸುಮಾರು 600 ಕಿ.ಮೀ. ಇದೆ. ಏಳು ಜಿಲ್ಲೆಯ 42 ವಿಧಾನಸಭಾ ಹಾಗೂ ಐದು ಲೋಕಸಭಾ ಕ್ಷೇತ್ರ ಒಳಗೊಂಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರ ಮತದಾರರಿದ್ದಾರೆ ಎಂದರು.

ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್. ಗಿರೇಗೌಡ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪೇರುದ್ರಸ್ವಾಮಿ, ಮುಖಂಡರಾದ ಶಿವರಾಜಗೌಡ, ಸಿದ್ದಾಪುರ ಮಂಜುನಾಥ, ಎಚ್. ಪ್ರಭಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.