ADVERTISEMENT

ಬೆಲೆ ಏರಿಕೆಯಲ್ಲೂ ಸಂಕ್ರಾಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ದಾವಣಗೆರೆ: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶನಿವಾರ ಜನರು ಬೆಲೆ ಏರಿಕೆಯನ್ನೂ ಲೆಕ್ಕಿಸದೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು.

ತೇವ ರಹಿತವಾದ ವಾತಾವರಣ ಸೃಷ್ಟಿಸುವ ಹೇಮಂತ ಋತು ಕಾಲದ ಈ ದಿನಗಳಲ್ಲಿ ಜನರು ಎಳ್ಳು, ಬೆಲ್ಲ, ಕಬ್ಬು, ಕೊಬ್ಬರಿ, ಶೇಂಗಾ ಕಾಳು, ಕಡ್ಲೆಕಾಯಿ, ಗೆಣಸು, ಸಕ್ಕರೆ ಅಚ್ಚು ಖರೀದಿಸಿ, ವಿವಿಧ ಹಣ್ಣು-ಹಂಪಲು ಜತೆ ಸಮ್ಮಿಶ್ರಣ ಮಾಡಿ ಹಂಚುವುದು ಸಂಕ್ರಾಂತಿ ಹಬ್ಬದ ಸಂಪ್ರದಾಯಗಳಲ್ಲಿ ಒಂದು.

ಎಳ್ಳು ಸಮೃದ್ಧಿಯ ಸಂಕೇತ. ಕಬ್ಬು ಐಶ್ವರ್ಯದ ಸಂಕೇತ. ಎಳ್ಳು-ಬೆಲ್ಲದ ಸಮ್ಮಿಶ್ರಣ ಸ್ನೇಹ-ಸಾಮರಸ್ಯದ ಸಂಕೇತ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಾಮಾಜಿಕ, ಕೌಟುಂಬಿಕ ಸಾಮರಸ್ಯ ಮೂಡಿಸುವಲ್ಲಿ ಸಂಕ್ರಾಂತಿ ಸದಾ ಮಹತ್ವದ ಪಾತ್ರ ನಿರ್ವಹಿಸುತ್ತಾ ಬಂದಿದೆ.

ಜಿಲ್ಲೆಯಲ್ಲೂ ಜನರು ಸಂಕ್ರಾಂತಿ ಸಂಭ್ರಮದಲ್ಲಿ ಮುಳುಗಿದ್ದು, ಎಣ್ಣು-ಬೆಲ್ಲ, ಕಬ್ಬು ಖರೀದಿಯ ಜತೆಗೆ, ಹಬ್ಬದ ಹಿನ್ನೆಲೆಯಲ್ಲಿ ದೊರೆಯುತ್ತಿರುವ ರಿಯಾಯತಿ ದರದ ಬಟ್ಟೆ, ಕಾರು, ಎಲೆಕ್ಟ್ರಾನಿಕ್ ಸಾಮಗ್ರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.

ನಗರದಲ್ಲಿ ಜಲ್ಲೆ ಕಬ್ಬಿಗೆ ರೂ 20-25, ಬೆಲ್ಲ ಕೆ.ಜಿ. ರೂ 30, ಸಕ್ಕರೆ ರೂ 32, ಕೊಬ್ಬರಿ ರೂ 85 ಇದೆ. ಇತರೆ ದಿನಸಿಗಳ ಬೆಲೆಯೂ ಹೆಚ್ಚಿದೆ. ಆದರೂ, ಜನರು ಉತ್ಸಾಹದಿಂದ   ಖರೀದಿಸಿದರು.

ಪಾಲಿಕೆ ಮುಂಭಾಗ, ಹಳೇ ಬಸ್‌ನಿಲ್ದಾಣದ ಹತ್ತಿರ, ಮಂಡಿಪೇಟೆ, ರಾಂ ಅಂಡ್ ಕೋ ವೃತ್ತ ಮತ್ತಿತರ ಭಾಗಗಳಲ್ಲಿ ಸಾರ್ವಜನಿಕರ ಸಂದಣಿ ಕಂಡುಬಂತು. ಗ್ರಾಮೀಣ ಪ್ರದೇಶಗಳಲ್ಲಿ ಜನರು ಕಾಳಿನ ಹುಲ್ಲು ತುಳಿಸಿ, ಧಾನ್ಯ ರಾಶಿ ಪೂಜಿಸುವ ಪರಿಪಾಠ ಅನೇಕ ಹಳ್ಳಿಗಳಲ್ಲಿ ಇದ್ದು, ಎಲ್ಲೆಡೆ ಸುಗ್ಗಿ ಹಬ್ಬ ಕಣ್ಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.