ADVERTISEMENT

ಬೇನಾಮಿ ರಸೀದಿ: ರೈತರ ದೂರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಕೋಲಾರ: ಎಪಿಎಂಸಿ ಮಾರುಕಟ್ಟೆಗೆ ಸರಕು ಪೂರೈಸುವ ರೈತರಿಗೆ ದಲ್ಲಾಳಿಗಳು ಬೇನಾಮಿ ಹೆಸರಲ್ಲಿ ರಸೀದಿ ನೀಡಿ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ  ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮಾರುಕಟ್ಟೆ ಸಹಾಯಕ ನಿರ್ದೇಶಕ ಶಿವಣ್ಣ ಅವರಿಗೆ ಶುಕ್ರವಾರ ದೂರು ಸಲ್ಲಿಸಿದರು.

ನೀರಿನ ಕೊರತೆಯ ನಡುವೆಯೇ ರೈತರು ಉತ್ತಮ ಗುಣಮಟ್ಟದ ತರಕಾರಿ ಬೆಳೆಯುತ್ತಿದ್ದಾರೆ. ಮಾರುಕಟ್ಟೆಗೆ ಬಂದು ಮಾರುವ ಸಂದರ್ಭದಲ್ಲಿ ದಲ್ಲಾಳಿಗಳು ಅಂಗಡಿಗಳ ಹೆಸರಿನಲ್ಲೆ ಇದುವರೆಗೂ ರಸೀದಿ ನೀಡುತ್ತಿದ್ದರು. ಆದರೆ ಕೆಲವು ದಿನಗಳಿಂದ ಅಂಗಡಿ ಹೆಸರಿಲ್ಲದ ಬೇನಾಮಿ ರಸೀದಿಗಳನ್ನು ನೀಡುತ್ತಿದ್ದಾರೆ. ಕಮಿಷನ್ ಮಳಿಗೆಗಳ ಹೆಸರಿನಲ್ಲೆ ರಸೀದಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

`ಬೇನಾಮಿ ಹೆಸರಿನಲ್ಲಿ ರಸೀದಿ ನೀಡಿದ ಬಳಿಕ ದಲ್ಲಾಳಿಗಳು ಸುಳ್ಳು ಲೆಕ್ಕ ನೀಡಿದರೆ ರೈತರಿಗೆ ತೊಂದರೆಯಾಗಲಿದೆ. ದಲ್ಲಾಳಿಗಳು ಯಾವುದೇ ಜವಾಬ್ದಾರಿಯಿಂದ, ಬಾಕಿ ಹಣ ನೀಡುವುದರಿಂದ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಿದೆ. ಅದರಿಂದ ರೈತರು ಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.

ಹೀಗಾಗಿ ಕೂಡಲೇ ಬೇನಾಮಿ ರಸೀದಿ ವ್ಯವಹಾರಕ್ಕೆ ಕಡಿವಾಣ ಹಾಕಬೇಕು~ ಎಂದು ಕೋರಿದರು.
ಸಂಘಟನೆಯ ಪ್ರಮುಖರಾದ ಕೆ.ಶ್ರೀನಿವಾಸಗೌಡ, ಬಿ.ರಾಮಚಂದ್ರ, ಅಬ್ಬಣಿ ಶಿವಪ್ಪ, ಎನ್.ಚಂದ್ರಶೇಖರ್, ಬೈಚೇಗೌಡ, ರವಿ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.