ಕಾರವಾರ: ಅದಿರು ಅಕ್ರಮ ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಡಿಐಜಿ ಹಿತೇಂದ್ರಕುಮಾರ ನೇತೃತ್ವದ ತಂಡ, ಶುಕ್ರವಾರ ಅಂಕೋಲಾ ತಾಲ್ಲೂಕಿನ ಬೇಲೆಕೇರಿಯ ಬಂದರು ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಒಂಬತ್ತು ಅಧಿಕಾರಿಗಳನ್ನು ಒಳಗೊಂಡ ಈ ತಂಡವು ಬೇಲೆಕೇರಿಯಲ್ಲಿರುವ ಮಲ್ಲಿಕಾರ್ಜುನ್ ಶಿಪ್ಪಿಂಗ್ ಪ್ರೈ. ಲಿ, ಸಲಗಾಂವಕರ್ ಮೈನಿಂಗ್ ಇಂಡ್ಸ್ಟ್ರೀಸ್ ಪ್ರೈ. ಲಿ. ಮತ್ತು ಅದಾನಿ ಎಂಟರ್ಪ್ರೈಸಿಸ್ ಕಂಪೆನಿಯ ಕಚೇರಿಗಳ ಮೇಲೂ ದಾಳಿ ನಡೆಸಿ ಅಗತ್ಯ ಮಾಹಿತಿ ಕಲೆಹಾಕಿದೆ ಎಂದು ಗೊತ್ತಾಗಿದೆ.
ಮಲ್ಲಿಕಾರ್ಜುನ ಶಿಪ್ಪಿಂಗ್ನ ಸತೀಸ್ ಸೈಲ್ ಮತ್ತು ಸಲಗಾಂವಕರ್ ಕಂಪೆನಿಯ ಹಿರಿಯ ವ್ಯವಸ್ಥಾಪಕ ಆರ್. ವಿ.ನಾಯಕ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೇಲೆಕೇರಿಯಿಂದ ಹೊರಟ ಸಿಬಿಐ ತಂಡವು ಅಂಕೋಲಾ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ತೆರಳಿ ಅದಿರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕಂಪೆನಿಗಳ ವಿರುದ್ಧ ಸಿಐಡಿ ದಾಖಲಿಸಿರುವ ಪ್ರಕರಣದ ವಿಚಾರಣೆ ಯಾವ ಹಂತದಲ್ಲಿದೆ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಿತು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.