ADVERTISEMENT

ಬೇವು ತಿಂದು ಅಂಗವಿಕಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST
ಬೇವು ತಿಂದು ಅಂಗವಿಕಲರ ಪ್ರತಿಭಟನೆ
ಬೇವು ತಿಂದು ಅಂಗವಿಕಲರ ಪ್ರತಿಭಟನೆ   

ಮಂಡ್ಯ:  ರಾಜ್ಯ ಬಜೆಟ್‌ನಲ್ಲಿ ಅಂಗವಿಕಲರ ಹಿತಾಸಕ್ತಿಯನ್ನು ಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಅಂಗವಿಕಲರು ಮತ್ತು ಪಾಲಕರ ಒಕ್ಕೂಟದ ಕಾರ್ಯಕರ್ತರು ಗುರುವಾರ ಬೇವಿನ ಎಲೆ ತಿಂದು, ಗಂಜಿ ಕುಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಿಗ್ಗೆ ಪ್ರತಿಭಟನೆ ಆರಂಭಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಬಜೆಟ್‌ನಲ್ಲಿ ಅಂಗವಿಕಲರ ಹಿತಾಸಕ್ತಿಯನ್ನು ಕಡೆಗಣಿಸಿವೆ. ಈ ಮೂಲಕ ಯುಗಾದಿ ಹಬ್ಬದ ಸಂದರ್ಭದಲ್ಲಿಯೇ ಮಂಡಿಸಿದ ಬಜೆಟ್ ವರ್ಷ ಪೂರ್ತಿ ಕಹಿ ಉಣಿಸುವ ಸೂಚನೆ ನೀಡಿದೆ ಎಂದು ದೂರಿದರು.

ಜನವಾದಿ ಮಹಿಳಾ ಸಂಘಟನೆಯ ಸಹ ಕಾರ್ಯದರ್ಶಿ ಸಿ.ಕುಮಾರಿ, ಯಶವಂತ್, ಕುಮಾರ, ರಾಮಕೃಷ್ಣ, ಭಾಷಾ, ರಾಜಣ್ಣ ಮತ್ತಿತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಂಗವಿಕಲರು, ಪಾಲಕರು, ಸರ್ಕಾರ ಈಗಲಾದರೂ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನವನ್ನು ಒಂದು ಸಾವಿರ ರೂಪಾಯಿಗೆ ಏರಿಸಬೇಕು, ಎಲ್ಲ ಅರ್ಹ ಅಂಗವಿಕಲರಿಗೂ ಬಸ್‌ಪಾಸ್‌ಗಳನ್ನು ಉಚಿತವಾಗಿ ನೀಡಬೇಕು. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ನೀಡಲು ಕ್ರಿಯಾಯೋಜನೆ ರೂಪಿಸಬೇಕು. ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಉದ್ಯೋಗ ನೀಡಲು ಮೀಸಲು ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಇವು ಸೇರಿದಂತೆ ಒಟ್ಟು 16 ಬೇಡಿಕೆಗಳನ್ನು ವಿಳಂಬ ಮಾಡದೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಮನವಿಯನ್ನು ಅವರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.