
ಹಳೇಬೀಡು: ಬರ ಪರಿಹಾರ ಕಾಮಗರಿಯಲ್ಲಿ ಪೈಪ್ಲೈನ್ ಹಾಕಿರುವುದನ್ನು ಬಿಟ್ಟರೆ ಉಳಿದ ಕಾಮಗಾರಿ ನಿರ್ವಹಿಸುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಅಲೆಯುವಂತಾಗಿದೆ. ಕೊಳವೆ ಬಾವಿಗೆ ಅಳವಡಿಸಿದ ಕೈಪಂಪ್ಗಳನ್ನು ದಿನವೆಲ್ಲ ಜಗ್ಗಿದರೂ ಬಿಂದಿಗೆ ತುಂಬುತ್ತಿಲ್ಲ...
ಹೀಗೆ ಒಂದೊಂದೇ ಸಮಸ್ಯೆ ಬಿಟ್ಟಿಟ್ಟವರು ನರಸಿಪುರ ಬೋವಿ ಕಾಲೊನಿಯ ಜನತೆ. ಶನಿವಾರ ಬರ ಪರಿಹಾರ ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ ಹಾಗೂ ಬೇಲೂರು ತಾಲ್ಲೂಕು ಬರ ಪರಿಹಾರ ಕಾಮಗಾರಿಯ ನೋಡಲ್ ಅಧಿಕಾರಿ ಪಲ್ಲವಿ ಅಕುರಾತಿ ಅವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಬಂಡಿಲಕ್ಕನಕೊಪ್ಪಲು ರಸ್ತೆ ಬದಿಯಲ್ಲಿರುವ ಕೊಳವೆ ಬಾವಿಗೆ ಮೋಟರ್ ಅಳವಡಿಸಲಾಗಿದೆ. ಸರಿಯಾಗಿ ನಿರ್ವಹಣೆ ಮಾಡುವವರು ಇಲ್ಲದೆ ನೀರಿನ ಅಭಾವ ತಲೆದೊರಿದೆ. ಬಿದುರುಕೆರೆ ಸಮೀಪದ ಕಿರು ನೀರು ಸರಬರಾಜು ಯೋಜನೆಯ ಮೋಟರ್ ತೊಂದರೆಯಾಗಿ ಮೂರು ತಿಂಗಳು ಕಳೆದರೂ ಗ್ರಾಮ ಪಂಚಾಯತಿ ದುರಸ್ತಿ ಮಾಡಿಸಿಲ್ಲ. ಆಟೊರಿಕ್ಷಾದವರಿಗೆ ನೂರಾರು ರೂಪಾಯಿ ಬಾಡಿಗೆ ನೀಡಿ ಹಳೇಬೀಡಿನ ದ್ವಾರಸಮುದ್ರ ಕೆರೆಯಿಂದ ಡ್ರಮ್ಮುಗಳಲ್ಲಿ ನೀರು ತರುವಂತಾಗಿದೆ ಎಂದು ಗ್ರಾಮಸ್ಥರು ಉಪ ವಿಭಾಗಾಧಿಕಾರಿಗೆ ತಿಳಿಸಿದರು.
ಹಳೇಬೀಡು ಮಲ್ಲಾಪುರ ಗ್ರಾಮದಲ್ಲಿ ಕೈಗೊಂಡಿರುವ ನೀರು ವಿತರಣಾ ಪೈಪ್ಲೈನ್ ಕಾಮಗಾರಿ ವೀಕ್ಷಿಸಿದರು. ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಳವಡಿಸಿರುವ ಸಿಸ್ಟನ್ ಹಾಗೂ ಪೈಪ್ಲೈನ್ ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಆರ್.ಲಿಂಗಪ್ಪಪ್ರೇಮಣ್ಣ, ಸದಸ್ಯರಾದ ಗಂಗಾಧರ್, ದಯಾಶಂಕರ್, ಪಿಡಿಒ ಎಚ್.ಎಚ್.ಸೋಮಶೇಖರ್, ಉಪ ತಹಶೀಲ್ದಾರ್ ಶ್ರೀಧರಮೂರ್ತಿ, ಕಂದಾಯ ನಿರೀಕ್ಷಕ ಎನ್.ಡಿ.ರಂಗಸ್ವಾಮಿ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.