ADVERTISEMENT

ಭ್ರಷ್ಟಾಚಾರ ನಿವಾರಣೆ: ಸವಾಲಾಗಿ ಸ್ವೀಕರಿಸಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST
ಭ್ರಷ್ಟಾಚಾರ ನಿವಾರಣೆ: ಸವಾಲಾಗಿ ಸ್ವೀಕರಿಸಿ
ಭ್ರಷ್ಟಾಚಾರ ನಿವಾರಣೆ: ಸವಾಲಾಗಿ ಸ್ವೀಕರಿಸಿ   

ಶಿವಮೊಗ್ಗ: ಪ್ರಸ್ತುತ ರಾಜಕಾರಣದಲ್ಲಿ ಕಂಡುಬರುತ್ತಿರುವ ಭ್ರಷ್ಟಾಚಾರ, ಅಪ್ರಾಮಾಣಿಕತೆಯನ್ನು ಒಂದು ಸಮಸ್ಯೆಯಾಗಿ ಪರಿಗಣಿಸದೆ ಸವಾಲಾಗಿ ಸ್ವೀಕರಿಸದಾಗ ಮಾತ್ರ ಇದರಿಂದ ಮುಕ್ತವಾಗಲು ಸಾಧ್ಯ ಎಂದು ಮಾಜಿ ಸಚಿವ ಡಾ.ಬಿ.ಎಲ್. ಶಂಕರ್ ಅಭಿಪ್ರಾಯಪಟ್ಟರು. ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ‘ಭಾರತೀಯ ಸಂವಿಧಾನದಲ್ಲಿ ರಾಜಕೀಯ ಪ್ರಾತಿನಿಧ್ಯದ ಸಮಸ್ಯೆಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ವ್ಯವಸ್ಥೆಯನ್ನು ಭ್ರಷ್ಟಗೊಳಿಸುವ ಮತ್ತು ಕೇವಲ ಭ್ರಷ್ಟರು ಬದುಕುವಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ.ಇದನ್ನು ಸವಾಲಾಗಿ ಸ್ವೀಕರಿಸಿ ಎದುರಿಸಿದರೆ ರಾಜಕಾರಣವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಸಾಧ್ಯ ಎಂದು ತಿಳಿಸಿದರು.

ಇತ್ತೀಚೆಗೆ ದೇಶದಲ್ಲಿ ರಾಜಕೀಯ ಪ್ರಾತಿನಿಧ್ಯದ ಕೂಗು ಕೇಳಿಬರುತ್ತಿದ್ದು, ಇದು ಉತ್ತಮ ಬೆಳವಣಿಗೆ. ಈ ಬಗ್ಗೆ ನಿರಂತರ ಚರ್ಚೆಯಾಗಬೇಕು ಎಂದ ಅವರು, ಸೂಕ್ತ ಪ್ರಾತಿನಿಧ್ಯ ಸಿಗದಿದ್ದರಿಂದ ದೇಶದ 600 ಜಿಲ್ಲೆಗಳ ಪೈಕಿ 180ಜಿಲ್ಲೆಗಳಲ್ಲಿ ಯಾವುದೇ ಪಕ್ಷದ ಆಡಳಿತ ನಡೆಸಲು ಆಗುತ್ತಿಲ್ಲ. ಇವುಗಳನ್ನು ‘ರೆಡ್ ಡಿಸ್ಟ್ರಿಕ್ಟ್’ ಎಂದು ಗುರುತಿಸುವ ದುಃಸ್ಥಿತಿ ಬಂದಿದೆ ಎಂದರು.

ವ್ಯವಸ್ಥೆ ನಿರ್ವಹಿಸುವಲ್ಲಿನ ದೋಷದಿಂದ ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುವೆಂಪು ವಿವಿ ಕುಲಸಚಿವ (ಆಡಳಿತ) ಡಾ.ಎಂ.ಕೃಷ್ಣಪ್ಪ, ಸಿಂಡಿಕೇಟ್ ಸದಸ್ಯ ಡಾ.ಎಂ. ಮಾರ್ತಾಂಡಪ್ಪ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ.ಜೆ.ಎಸ್. ಸದಾನಂದ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಡಾ.ಬಿ.ಎಸ್.ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.