ADVERTISEMENT

ಮಣ್ಣಲ್ಲಿ ಅರಳಿದ ಮೊಸಳೆ, ಸರ್ಪ

ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:30 IST
Last Updated 15 ಡಿಸೆಂಬರ್ 2012, 9:30 IST

ಯಳಂದೂರು: ಬಾಯ್ತೆರೆದು ಕುಳಿತಿರುವ ಮೊಸಳೆ, ಹೆಡೆ ಎತ್ತಿ ನಿಂತಿರುವ ಸರ್ಪ, ಗಿರಿಬಿಚ್ಚಿ ಕುಳಿತ್ತಿರುವ ನವಿಲು, ಗಣಪ...

ಇದು ತಾಲ್ಲೂಕಿನಲ್ಲಿ ಈಚೆಗೆ ನಡೆದ ಪ್ರೌಢಶಾಲಾ ವಿಭಾಗದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಕ್ಕ ಳ ಕೈಯಿಂದ ಮಣ್ಣಿನಲ್ಲಿ ರೂಪುಗೊಂಡ ಕಲಾಕೃತಿಗಳ ಝಲಕ್.

ವಿದ್ಯಾರ್ಥಿಗಳು ಕಪ್ಪು ಹಾಗೂ ಕಂದು ಮಣ್ಣನ್ನೇ ಬಳಸಿಕೊಂಡು ಮೂರ್ತ ಸ್ವರೂಪ ನೀಡಿ ನೋಡಗರನ್ನು ಬೆರಗುಗೊಳಿಸಿದ್ದು ಸತ್ಯ. ಪ್ರತಿಭಾ ಕಾರಂಜಿ ಯಲ್ಲಿ ಸ್ಥಳೀಯ ಕಲೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಈ ಕಲೆ ಅರಳಲು ಸಾಧ್ಯವಾಯಿತು.

ಶಿಕ್ಷಕರ ಮಾರ್ಗದರ್ಶನ ಹಾಗೂ ತಮ್ಮಲ್ಲಿನ ನೈಪುಣ್ಯತೆ ಸೇರಿಸಿ ತಾನು ಮೊಸಳೆಯನ್ನು ಮಾಡಿದೆ ಎನ್ನುತ್ತಾನೆ ಸುಷ್ಮಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಯೋಗೇಶ್.

ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ರಚಿಸಿರುವ ಹೆಡೆ ಎತ್ತಿದ ಸರ್ಪ ಹಾಗೂ ಅದರ ಸುತ್ತಲೂ ಉದುರಿಸಿದ ಅರಿಸಿನ, ಕುಂಕುಮದ ಪುಡಿ ನೈಜ ಹುತ್ತವನ್ನೇ ನಾಚಿಸುವಂತಿದ್ದು ಸುಳ್ಳಲ್ಲ.

ಇದರ ಜೊತೆಗೆ ನವಿಲನ್ನು ಮಾಡಿ ಅದರ ಪುಕ್ಕಕ್ಕೆ ಅಲಂಕೃತ ಹಸಿರು ಎಲೆಗಳಿಂದ ಮಾಡಿದ್ದ ಕಲಾಕೃತಿ, ಮಣ್ಣಿನ ಗಣೇಶನ ಮೂರ್ತಿಗಳು ನೆರೆದಿದ್ದವರ ಆಕರ್ಷಣೆಯ ಕೇಂದ್ರಗಳಾಗಿದ್ದವು.

ಈ ವಿಷಯದ ಬಗ್ಗೆ ಶಿಕ್ಷಕರು ಮಾರ್ಗದರ್ಶನ ನೀಡಿದರು. ಮಣ್ಣು, ಬಣ್ಣ ಹಾಗೂ ಕಲಾಕೃತಿಯ ಆಯ್ಕೆಯನ್ನು ನಮಗೆ ಬಿಟ್ಟಿದ್ದರು. ಹಾಗಾಗಿ ನಾನು ನವಿಲನ್ನು ಮಣ್ಣಿನಿಂದ ಮಾಡಿದ್ದೇನೆ ಎಂದು ಎಸ್‌ವಿಡಿಎಸ್ ಪ್ರೌಢಶಾಲೆಯ ವಿದ್ಯಾರ್ಥಿ ಶರತ್‌ಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT