ಗೌರಿಬಿದನೂರು: ತಾಲ್ಲೂಕಿನ ಗೊಟಕನಾಪುರ, ಗಂಗಸಂದ್ರ ಗ್ರಾಮಗಳ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯೆಯರು ಮಂಗಳವಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ರೆಡ್ಡಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೆಡ್ಡಪ್ಪ, ತಾಲ್ಲೂಕಿನ ಗೊಟಕನಾಪುರ, ಗಂಗಸಂದ್ರ ಗ್ರಾಮಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯೆಯರು ಸ್ವಯಂಪ್ರೇರಣೆಯಿಂದ ತಮ್ಮ ಗ್ರಾಮಗಳಲ್ಲಿ ವಾರದಲ್ಲಿ ಒಂದು ದಿನ ಚರಂಡಿ, ರಸ್ತೆಗಳ ಸ್ವಚ್ಛ ಮಾಡುತ್ತಾರೆ. ಸ್ವಚ್ಛತೆ ಮೂಲಕ ಗ್ರಾಮಸ್ಥರಲ್ಲಿ ಉತ್ತಮ ಪರಿಸರ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬೆಳಿಗ್ಗೆ 7.30ರಿಂದ 10.30ರ ವರೆಗೆ ಶ್ರಮದಾನ ಮಾಡಿದ ಸದಸ್ಯೆಯರು ಕಸ-ಕಡ್ಡಿ, ತಾಜ್ಯ ವಸ್ತು ತೆರವುಗೊಳಿಸಿದರು. ಪುರಸಭೆ ಟ್ರ್ಯಾಕ್ಟರ್ಗಳಲ್ಲಿ ಕಸವನ್ನು ತುಂಬಿ ವಿಲೇವಾರಿ ಮಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಶ್ರಮದಾನಕ್ಕೆ ಕೈಜೋಡಿಸಿದರು.
ಗೊಟಕನಾಪುರ ಗ್ರಾಮದ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಜ್ಯೋತಿ ಮಹಿಳಾ ಸ್ವ-ಸಹಾಯ ಸಂಘ, ಗಂಗಸಂದ್ರದ ನವಸಾಕ್ಷರರ ಸಂಘ, ಗೌತಮಿ ಮಹಿಳಾ ಸ್ವ-ಸಹಾಯ ಸಂಘ, ಬಾಬಾಜಾನ್ ಮಹಿಳಾ ಸ್ವ-ಸಹಾಯ ಸಂಘ ಸೇರಿದಂತೆ ಇತರ ಸ್ವಯಂ-ಸೇವಾ ಸಂಘಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.