ಶಿವಮೊಗ್ಗ: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗೆ ವಿಶೇಷ ಸಮಿತಿ ರಚಿಸಲು ಸರ್ಕಾರ ಉನ್ನತ ಮಟ್ಟದಲ್ಲಿ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ನಗರದ `ಮಾನಸಧಾರಾ ಟ್ರಸ್ಟ್~ ಮತ್ತು `ಸಹ್ಯಾದ್ರಿ ನ್ಯೂರೊ ಸೈಕ್ಯಾಟ್ರಿಕ್ ಅಸೋಸಿಯೇಶನ್~ ಸಂಯಕ್ತವಾಗಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ ಮತ್ತು ಮಾನಸಧಾರಾ ಪುನರ್ವಸತಿ ಕೇಂದ್ರದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗೆ ಸರ್ಕಾರದ ಜತೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ. ಸರ್ಕಾರ ಹಣ ನೀಡಬಹುದು. ಆದರೆ, ಮಾನಸಿಕ ಅಸ್ವಸ್ಥರ ಸೇವೆ ಮಾಡಲು ಸ್ವಯಂ ಸೇವಕರು ಮುಂದೆ ಬರಬೇಕಿದೆ ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಮಾನಸಿಕ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.
ಕ್ಷಮಾ ಟ್ರಸ್ಟ್ನ ಕಾರ್ಯದರ್ಶಿ ಡಾ.ಎಚ್. ಚಂದ್ರಶೇಖರ್ ಮಾತನಾಡಿ, `ಖಿನ್ನತೆ~ ಈ ವರ್ಷದ ಮಾನಸಿಕ ಆರೋಗ್ಯ ಸಪ್ತಾಹದ ವಿಶೇಷವಾಗಿದೆ. ವಿಶ್ವದಾದ್ಯಂತ ಶೇ 15ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ10 ರಿಂದ15 ರಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿವರಣೆ ನೀಡಿದರು.
ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಹ್ಯಾದ್ರಿ ನ್ಯೂರೊ ಸೈಕ್ಯಾಟ್ರಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ.ಎ.ಶಿವರಾಮಕೃಷ್ಣ, ಡಾ.ಡಿ.ಹರೀಶ್, ಡಾ.ಪ್ರೀತಿ ವಿ. ಶಾನಭಾಗ್ ಉಪಸ್ಥಿತರಿದ್ದರು. ಮಾನಸಧಾರಾ ಅಧ್ಯಕ್ಷ ಡಾ.ಕೆ.ಎ.ಅಶೋಕ್ ಪೈ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.