ADVERTISEMENT

ಮಿತ ಆಹಾರ ಸೇವನೆಯಿಂದ ಆರೋಗ್ಯ ಭಾಗ್ಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ದೊಡ್ಡಬಳ್ಳಾಪುರ: ಮಿತವಾಗಿ ಆಹಾರ ಸೇವನೆ ಮಾಡುವ ಮೂಲಕ ಯುವಜನತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಂದಿನ ಆರೋಗ್ಯವಂತ ಯುವಕರೇ ದೇಶದ ಆಸ್ತಿ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಬಿ.ಎಂ.ರವಿಶಂಕರ್ ಹೇಳಿದರು.

ನಗರದ ಶ್ರೀಕೊಂಗಾಡಿಯಪ್ಪ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ `ಯುವಜನತೆಗೆ ಆರೋಗ್ಯ~ ಕಾರ್ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರದ ಸರ್ಕಾರಿ ಆಸ್ಪತ್ರೆಗೆ ದಿನಕ್ಕೆ 400 ರಿಂದ 500 ರೋಗಿಗಳು ತಮ್ಮ ಆರೋಗ್ಯ ತಪಾಸಣೆಗಾಗಿ ಬರುತ್ತಿದ್ದಾರೆ. ಇವರೆಲ್ಲಾ ಕಲುಷಿತವಾದ ನೀರಿನ ಸೇವನೆಯಿಂದ ಅದರಲ್ಲೂ ಹೆಚ್ಚು ಜನ ಪ್ಲೋರೈಡ್ ಸಹಿತವಾದ ನೀರನ್ನು ಕುಡಿದು ಮೂಳೆ ಮತ್ತು ಕಿಡ್ನಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

ಯುವ ಜನತೆ ಗಾಂಜಾ, ಅಫೀಮು, ತಂಬಾಕಿನಂತ ದುಶ್ಚಟಗಳಿಗೆ ದಾಸರಾಗಿ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮದ್ಯಸೇವನೆ ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಸಮಾಜ ಕಂಟಕರಾಗುತ್ತಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲೇ ಮೋಜು ಮಸ್ತಿಗಳಿಗೆ ಮುಂದಾಗುವ ಮೂಲಕ ಹರೆಯ ಅರಳುವಷ್ಟರಲ್ಲೇ ಮುದುಡಿ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.

 ತಂದೆ ತಾಯಿಗಳು ತಮ್ಮ ಕೌಟುಂಬಿಕ  ಜವಾಬ್ದಾರಿಗಳನ್ನು ಹರೆಯದವರ ಮೇಲೆ ಹಾಕುವುದರಿಂದ ಹಣ ಸಂಪಾದನೆ ಮಾಡಲು ಮುಂದಾದ ಯುವಕರು ಚಟಗಳಿಗೆ ಬಲಿಯಾಗುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ವಿ.ಸುಬ್ರಹ್ಮಣ್ಯಂ ವಹಿಸಿದ್ದರು. ಪ್ರಾಧ್ಯಾಪಕಿ ಪ್ರೊ.ಸಾವಿತ್ರಿದೇವಿ, ಡಾ.ಬಿ.ಎನ್.ನರಸಿಂಹಮೂರ್ತಿ, ಪ್ರೊ.ರಂಗಸ್ವಾಮಿ ಬೆಳಕವಾಡಿ, ಪ್ರೊ.ಅಬ್ಲುಲ್‌ರವೂಫ್, ಕೆ.ಸಂಜೀವಕುಮಾರ್,ನಾಗಮಣಿ ಹಾಗೂ ಕಾರ್ಯಕ್ರಮ ಅಧಿಕಾರಿ ಪ್ರೊ.ಚಂದ್ರಪ್ಪ ಮತ್ತಿತರರು ಇದ್ದರು.                                      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.