ರಾಮನಗರ: ಕೆಂಗೇರಿ ಬಳಿಯ ಮರಿಯಪ್ಪನ ಪಾಳ್ಯದ `ಮುತ್ತೂಟ್ ಫೈನಾನ್ಸ್~ ಸಂಸ್ಥೆಯಲ್ಲಿ ಹಣ ಮತ್ತು ಚಿನ್ನಾಭರಣ ದೋಚಲು ಬಂದಿದ್ದ ದುಷ್ಕರ್ಮಿಗಳು ಪಿಸ್ತೂಲ್ನಿಂದ ಸಂಸ್ಥೆಯ ವ್ಯವಸ್ಥಾಪಕ ಸುಧಾಕರ್ (55) ಅವರ ಹೊಟ್ಟೆಗೆ ಗುಂಡು ಹಾರಿಸಿ ಪರಾರಿಯಾದ ಘಟನೆ ಮಂಗಳವಾರ ನಡೆದಿದೆ. ತೀವ್ರ ಗಾಯಗೊಂಡಿರುವ ಸುಧಾಕರ್ ಅವರನ್ನು ವಿಜಯನಗರದ ಗಾಯಿತ್ರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ವಿವರ: ಬೆಳಿಗ್ಗೆ 11ರಿಂದ 11.15ರ ವೇಳೆಗೆ ಇಬ್ಬರು ದುಷ್ಕರ್ಮಿಗಳು ಸಂಸ್ಥೆಯ ಕಚೇರಿ ಪ್ರವೇಶಿಸಿದ್ದಾರೆ. ಇವರಲ್ಲಿ ಒಬ್ಬ ತಲೆಗೆ ಹೆಲ್ಮೆಟ್ ಧರಿಸಿದ್ದರೆ, ಮತ್ತೊಬ್ಬ ಬಟ್ಟೆಯ ಮುಖವಾಡ (ಮಾಸ್ಕ್) ಧರಿಸಿದ್ದ. ಈ ಸಂದರ್ಭ ಕಚೇರಿಯಲ್ಲಿ ವ್ಯವಸ್ಥಾಪಕರು ಮತ್ತು ಮಹಿಳಾ ಸಿಬ್ಬಂದಿ ತೇಜಸ್ವಿನಿ ಎಂಬುವರು ಕಾರ್ಯ ನಿರ್ವಹಿಸುತ್ತಿದ್ದರು.
ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ ತೇಜಸ್ವಿನಿ ಅವರ ಬಳಿ, ಮತ್ತೊಬ್ಬ ವ್ಯವಸ್ಥಾಪಕರ ಬಳಿ ತೆರಳಿದ್ದಾರೆ. ಮಹಿಳೆಯನ್ನು ಹೆದರಿಸಿ, ಕತ್ತಿನಲ್ಲಿದ್ದ ಸರ ಬಿಚ್ಚಿಕೊಡುವಂತೆ ಬಲವಂತ ಮಾಡಿದ್ದಾನೆ. ಮತ್ತೊಬ್ಬ ದುಷ್ಕರ್ಮಿ ವ್ಯವಸ್ಥಾಪಕರಿಗೆ ಪಿಸ್ತೂಲ್ ತೋರಿಸಿ, ಹಣ ಮತ್ತು ಚಿನ್ನಾಭರಣವನ್ನು ಚೀಲದಲ್ಲಿ ತುಂಬಿಕೊಡುವಂತೆ ಹೆದರಿಸಿದ್ದಾನೆ.
ತೇಜಸ್ವಿನಿ ಸರ ಕೊಡಲು ನಿರಾಕರಿಸಿದಾಗ ದುಷ್ಕರ್ಮಿ ಬಲವಂತವಾಗಿ ಸರವನ್ನು ಕಸಿದುಕೊಂಡಿದ್ದಾನೆ. ಆಗ ಅವರು ಜೋರಾಗಿ ಚೀರಿದ್ದಾರೆ. ಇದರಿಂದ ಗಾಬರಿಗೊಂಡ ಮತ್ತೊಬ್ಬ ದುಷ್ಕರ್ಮಿ ತನ್ನ ಕೈಯಲ್ಲಿದ್ದ ಪಿಸ್ತೂಲಿನಿಂದ ಸುಧಾಕರ್ ಅವರಿಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಸುಧಾಕರ್ ತುರ್ತು ಗುಂಡಿ (ಸೈರನ್) ಒತ್ತಿದ್ದಾರೆ. ಸೈರನ್ನ ಶಬ್ದದಿಂದ ವಿಚಲಿತರಾದ ದುಷ್ಕರ್ಮಿಗಳು ಪಿಸ್ತೂಲ್ ಮತ್ತು ಚೀಲವನ್ನು ಅಲ್ಲಿಯೇ ಎಸೆದು ಕಚೇರಿಯಿಂದ ಹೊರಬಂದು, ಬೈಕ್ ಏರಿ ಪರಾರಿಯಾಗಿದ್ದಾರೆ.
ಎಂದು ಡಿಎಸ್ಪಿ ಎಂ.ಜಿ.ರಾಮಕೃಷ್ಣಪ್ಪ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. ಪಿಸ್ತೂಲ್ ಗುಂಡು ತಗುಲಿರುವ ಸುಧಾಕರ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಐದು ತಂಡಗಳನ್ನು ರಚಿಸಿದ್ದು ಅವರನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಪ್ರಕರಣ ಕುರಿತು ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ತೇಜಸ್ವಿನಿ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.