ADVERTISEMENT

ಯುಗಾದಿ ಹಬ್ಬದ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 19:30 IST
Last Updated 3 ಏಪ್ರಿಲ್ 2011, 19:30 IST

ಶಿವಮೊಗ್ಗ: ಚಾಂದ್ರಮಾನ ಯುಗಾದಿ ಪ್ರಯುಕ್ತ ನಗರದಲ್ಲಿ ಭಾನುವಾರ ಮಾವು ಮತ್ತು ಬೇವಿನ ಸೊಪ್ಪು, ಮಲ್ಲಿಗೆ ಹೂವು, ಸೇವಂತಿಗೆ ಹೂವು, ಬಾಳೆಎಲೆ ಸೇರಿದಂತೆ ಹಲವು ತರಹದ ಹಣ್ಣುಗಳ ವ್ಯಾಪಾರದ ಭರಾಟೆ ಜೋರಾಗಿತ್ತು.

ಉರಿಬಿಸಿಲಿನ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ನಗರದ ಶಿವಪ್ಪ ನಾಯಕ ವೃತ್ತ, ಹಳೇ ತಾಲ್ಲೂಕು ಕಚೇರಿಯಲ್ಲಿನ ಮಾರುಕಟ್ಟೆ, ಗಾಂಧಿಬಜಾರ್‌ಗಳಲ್ಲಿ ಮಾವಿನ, ಬೇವಿನ ಸೊಪ್ಪುಗಳ ಖರೀದಿಗೆ ಜನಸ್ತೋಮ ತುಂಬಿ ತುಳುಕುತ್ತಿತ್ತು. ಹಬ್ಬದ ಅಂಗವಾಗಿ ಮಾವು, ಬೇವಿನ ಸೊಪ್ಪು ಮತ್ತು ಬಾಳೆ ಎಲೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಕಂಡುಬಂತು.

ಹಬ್ಬದ ಹಿನ್ನೆಲೆಯಲ್ಲಿ ನಗರದ ಸುತ್ತಮುತ್ತಲಿನ ಗ್ರಾಮದಿಂದ ಮಾವು-ಬೇವಿನ ಸೊಪ್ಪು ಸೇರಿದಂತೆ ಹಬ್ಬದ ಸಾಮಗ್ರಿಗಳು ನಗರಕ್ಕೆ ಬಂದಿದ್ದವು. ಸುಡು ಬಿಸಿಲಿನಲ್ಲಿಯೂ ಮಧ್ಯಾಹ್ನ 12ರ ಸುಮಾರಿಗೆ ಹಬ್ಬದ ಸಾಮಗ್ರಿಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಮಧ್ಯಾಹ್ನ 1ರ ನಂತರ ಜನರ ಆಗಮನ ಬಹುತೇಕ ಕಡಿಮೆಯಾಯಿತು. ಆದರೆ, ಸಂಜೆ 5ರ ನಂತರ ಮತ್ತೆ ಮಾರುಕಟ್ಟೆ ಗ್ರಾಹಕರಿಂದ ಗಿಜುಗುಡುತ್ತಿತ್ತು.

ಬೆಲೆ ಏರಿಕೆಯ ಬರೆ
ಹಬ್ಬದ ಪ್ರಯುಕ್ತ ಸಹಜವಾಗಿ ಮಾವು, ಬೇವಿನ ಸೊಪ್ಪು, ಹೂವು, ಹಣ್ಣುಗಳಿಗೆ ಭಾರೀ ಬೇಡಿಕೆ ಬಂದಿದ್ದರಿಂದ ಇವೆಲ್ಲವುಗಳ ಬೆಲೆ ಏರಿಕೆಯಾಗಿತ್ತು. ಇದರಿಂದ ಸಾಮಾನ್ಯರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಯಿತು.

ಮಾವಿನ ಮತ್ತು ಬೇವಿನ ಸೊಪ್ಪು ಒಂದು ಗಂಟಿಗೆ 5ರಿಂದ 10ರೂವರೆಗೆ ಏರಿತ್ತು. ಅದೇ ರೀತಿ, ಸೇವಂತಿ ಹೂವು ಕೆಜಿಗೆ 50 ರೂ, ದ್ರಾಕ್ಷಿ ಕೆಜಿಗೆ 60ರೂ, ಸೇಬು ಕೆಜಿಗೆ 140ರೂ ತಲುಪಿತ್ತು. ಆದರೂ ಕೊಳ್ಳುವವರಿಗೆ ಕೊರತೆ ಇರಲಿಲ್ಲ. 

ವ್ಯಾಪಾರಸ್ಥರೂ ಕಳೆದ ವರ್ಷದಂತೆ ಈ ಬಾರಿಯೂ ಹರ್ಷವಾಗಿದ್ದಾರೆ. ಈ ಬಾರಿ ನಾಲ್ಕು ಚೀಲದ ಸೊಪ್ಪು ಮಾರಾಟವಾಗಿದೆ. ಹಾಗಾಗಿ, ವ್ಯಾಪಾರ ತೃಪ್ತಿ ತಂದಿದೆ ಎನ್ನುತ್ತಾರೆ ವ್ಯಾಪಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.